ಆಟ ಭಂಡಾಟ, ಆಸ್ಟ್ರೇಲಿಯಾದಿಂದ ಕ್ರಿಕೆಟ್ಗೆ ಅವಮಾನ
ಬೆಂಗಳೂರು, ಜ. 7 : ಸಿಡ್ನಿಯಲ್ಲಿ ನಿನ್ನೆ ಮುಕ್ತಾಯವಾದ ಆಸ್ಟ್ರೇಲಿಯ-ಭಾರತ ನಡುವಣ ಎರಡನೇ ಟೆಸ್ಟ್ ನಾನಾ ಕಾರಣಗಳಿಗಾಗಿ ಸುದ್ದಿಕೇಂದ್ರದಲ್ಲಿದೆ. ಯಾವುದು ಎತ್ತಲಾಗಾದರೂ ಹೋಗಲಿ, ಕ್ರಿಕೆಟ್ ಸಂಭಾವಿತರ ಆಟ ಎಂಬ ನಾಣ್ಣುಡಿಗೆ ಚ್ಯುತಿ ಬಂದಿರುವುದಂತೂ ನಿಶ್ಚಿತ. ಆಟಗಾರರು ತಪ್ಪು ಮಾಡುವುದು ಸಹಜ. ಅಂಪೈರುಗಳೂ ತಪ್ಪು ಮಾಡುವುದು ಮಾನವ ಸಹಜವೆ. ಆದರೆ, ಸಿಡ್ನಿಯಲ್ಲಿ ನ್ಯಾಯಮೂರ್ತಿಗಳ ಸ್ಥಾನದಲ್ಲಿದ್ದ ಸ್ಟೀವ್ ಬಕ್ನರ್ ಮತ್ತು ಮಾರ್ಕ್ ಬೆನ್ಸನ್ ಭಾರತವನ್ನು ಸೋಲಿಸುವುದಕ್ಕೆ ನಿಂತಿದ್ದು ದುರದೃಷ್ಟಕರ, ಕ್ರಿಕೆಟ್ ಆಟಕ್ಕೆ ಅವಮಾನ.
ಆಸ್ಟ್ರೇಲಿಯ ಆಟಗಾರರು ಭಂಡಾಟ ಆಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಎದುರಾಳಿ ತಂಡದ ಆಟಗಾರರನ್ನು ಛೇಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ದಾಂಡಿಗರ ಆಟದ ಧ್ಯಾನಕ್ಕೆ ಭಂಗ ತರುವುದರಲ್ಲಿ ಅವರು ನಿಸ್ಸೀಮರು. ಇದು ಮಿತಿಮೀರದಿದ್ದರೆ ತಪ್ಪೇನೂ ಇಲ್ಲ ಎನ್ನುವ ಧೋರಣೆ ಎಲ್ಲ ಕ್ರಿಕೆಟಿಗರಲ್ಲಿದೆ. ಈಗ ನಿವೃತ್ತಿ ಆಗಿರಬಹುದು, ಆದರೆ ಸ್ಟೀವ್ ವಾ ಮತ್ತು ಮಾರ್ಕ್ ವಾ ಶುದ್ಧ ತರಲೆಗಳಾಗಿದ್ದರು. ಅವರ ಸಂತತಿಯನ್ನು 'ಕಿರಿಕ್' ಪಾಂಟಿಂಗ್ ಪಡೆ ಮುಂದುವರೆಸುತ್ತಿದ್ದಾರೆ, ಅಷ್ಟೆ.
ಆಸ್ಟ್ರೇಲಿಯ ಒಳ್ಳೆಯ ದೇಶ ಎನ್ನುತ್ತಾರೆ. ಅಲ್ಲಿನ ಅರ್ಥ ವ್ಯವಸ್ಥೆ ಸುಧಾರಣೆಗೆ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಹವೆ ಚೆನ್ನಾಗಿದೆ. ಒಬ್ಬಂಟಿ ಮಹಿಳೆಯರು ಸುರಕ್ಷಿತವಾಗಿ ಇರಬಹುದಾದ ದೇಶ ಎಂಬ ಒಳ್ಳೆಯ ಮಾತುಗಳೂ ಆ ದೇಶಕ್ಕೆ ಸಂದಿವೆ. ಹನೀಫ್ ಪ್ರಕರಣ ಮತ್ತು ಸಿಮಂಡ್ಸ್ ಹಗರಣ ಹಾಗೂ ಅಂಪೈರುಗಳ ಗೋಲ್ ಮಾಲ್ ತೀರ್ಪುಗಳು ದೇಶದ ಹೆಸರಿಗೆ ಸಗಣಿ ಬಳಿದಿವೆ. ಅಲ್ಲಿ ಏನೇನಾಯಿತು, ವಿವರವಾಗಿ ಓದಿ. ಕಥೆ ಹೇಳುತ್ತವೆ ಚಿತ್ರಗಳೂ, ಕೇಳಿ. ಇದೀಗ ಬಂದ ವರ್ತಮಾನದ ಪ್ರಕಾರ ಪ್ರವಾಸವೇ ರದ್ದಾಗುವ ಲಕ್ಷಣಗಳೂ ಕಾಣಿಸುತ್ತಿವೆ. ಭಜ್ಜಿಗೆ ಆದ ಅವಮಾನ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು. ಐಸಿಸಿಗೆ ದೂರು ದಾಖಲಿಸುವ ಚಿಂತೆಯಲ್ಲಿದೆ. ಅದಕ್ಕೆ ಬೇಕಾಗುವ ದಾಖಲೆಗಳನ್ನು ಕಂಡುಕೊಳ್ಳಲು ಅಭ್ಯಾಸ ಪಂದ್ಯಕ್ಕಾಗಿ ಕ್ಯಾನ್ಬೆರಾಗೆ ತೆರಳದೇ ಸಿಡ್ನಿಯಲ್ಲಿಯೇ ಉಳಿದಿದೆ.
ಏತನ್ಮಧ್ಯೆ ಉಭಯ ತಂಡಗಳ ನಡುವೆ ಶಾಂತಿ ಸಭೆಗಳು ನಡೆಯುತ್ತಿವೆ. ರಿಕಿ ಮತ್ತು ಕುಂಬ್ಳೆ ಇಬ್ಬರೂ ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಚೀಫ್ ಜೇಮ್ಸ್ ಸದರ್ಲಾಂಡ್ ಕಿವಿಮಾತು ಹೇಳಿದ್ದಾರೆ. ಪ್ರತಿ ಸರಣಿಯಲ್ಲಿಯೂ ಜಿದ್ದಾಜಿದ್ದಿನ ಹಣಾಹಣಿ, ಕೆಸರೆರಚಾಟ ಇದ್ದದ್ದೇ. ಆದರೆ ಅದು ಈ ಬಾರಿ ತಾರಕಕ್ಕೇರಿದೆ. ಪರ್ತ್ ಮತ್ತು ಓವಲ್ನಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.
(ದಟ್ಸ್ಕ್ರಿಕೆಟ್ ವಾರ್ತೆ)
ಪೂರಕ
ಓದಿಗೆ:
ಭಜ್ಜಿ
ಮೇಲಿನ
ನಿಷೇಧಕ್ಕೆ
ಸಿಡ್ನಿಯಲ್ಲಿ
ಸಿಡಿದ
ಕಿಡಿ!
ಹರ್ಭಜನ್
ವಿರುದ್ಧ
ಸಮರಕ್ಕೆ
ಸಿದ್ಧವಾದ
ಆಸೀಸ್
ಪಡೆ