ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ
ಕೋಲಾರ : ಜಿಲ್ಲೆಯ ಹಳೆಪಾಳ್ಯ ಗ್ರಾಮದಲ್ಲಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಗ್ರಾನೈಟ್ ಬಂಡೆ ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಜರುಗಿದೆ.
ಬಂಡೆ ಕೆಳಗೆ ಸಿಗ್ಹಾಕ್ಕಿಕೊಂಡ ಮೂವರು ಗುರುತು ಸಿಗಲಾರದಷ್ಟು ಜಜ್ಜಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
***
ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ ನೀಡಲು ಆಗ್ರಹ
ಬೆಂಗಳೂರು : ಬ್ರಾಹ್ಮಣರಿಗೆ ರಾಜಕೀಯ ಮೀಸಲು ಕಲ್ಪಿಸುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಮನವಿ ಸಲ್ಲಿಸಲು ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘ ನಿರ್ಧರಿಸಿದೆ.
ನಗರದ ಚಾಮರಾಜಪೇಟೆಯಲ್ಲಿ ನಡೆದ 'ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ' ಕುರಿತ ವಿಚಾರ ಸಂಕಿರಣ ನಡೆಯಿತು. ಬ್ರಾಹ್ಮಣರಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಈ ಹಿಂದೆ ಸಾಕಷ್ಟು ಅವಕಾಶ ಒದಗಿತ್ತು. ಆದರೆ, ನಾವೇ ಹಿಂದೇಟು ಹಾಕಿದ್ದೇವೆ ಎಂದು ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಹೇಳಿದರು.
ರಾಜಕೀಯವಾಗಿ ಪ್ರಬಲರಾದರೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ.ಅಗತ್ಯಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ಮಾಜಿ ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ವಿ. ಶಂಕರ ನಾರಾಯಣ, ಗವಿಗಂಗಾಧರ ಸ್ವಾಮಿ ದೇವಸ್ಥಾನದ ಸೋಮಸುಂದರ ದೀಕ್ಷಿತ, ಉದ್ಯಮಿ ಛಾಯಾಪತಿ, ಸಂಘದ ಅಧ್ಯಕ್ಷ ಆರ್. ಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಜಿ. ಲಕ್ಷ್ಮೀನಾರಾಯಣ ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
****
ದೂರದರ್ಶನದ ಮಹೇಶ್ ಜೋಷಿ ರಾಜಕೀಯಕ್ಕೆ
ಬೆಂಗಳೂರು : ಸರ್ಕಾರಿ ಉದ್ಯೋಗ ತೊರೆದು ರಾಜಕೀಯ ಪ್ರವೇಶಿಸುತ್ತಿರುವ ಪಟ್ಟಿಯಲ್ಲಿ ದೂರದರ್ಶನದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಷಿ ಹೊಸ ಸೇರ್ಪಡೆಯಾಗಲಿದ್ದಾರೆ.
ಸರ್ಕಾರಿ ಉದ್ಯೋಗ ತೊರೆದು ಶೀಘ್ರದಲ್ಲೇ ತಮ್ಮ ಪಕ್ಷ ಸೇರುತ್ತಾರೆ ಎಂದು ಮಾಯಾವತಿಯವರ ಬಹುಜನ ಪಕ್ಷದ ರಾಜ್ಯ ವಕ್ತಾರರು ಹೇಳಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳಾದ ಬಿ.ಕೆ ಶಿವರಾಮ್, ದಿವಾಕರ್ ಇಲಾಖೆ ತೊರೆದು ರಾಜಕೀಯ ಪ್ರವೇಶಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದಲ್ಲದೇ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ.ರಾಮಮೂರ್ತಿ ಅವರೂ ಸದ್ಯದಲ್ಲೇ ಇಲಾಖೆ ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ಕೂಡ ಮಹೇಶ್ ಜೋಷಿಯವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications