ಬಿಹಾರಿಗಳ ಸೊಲ್ಲಡಗಿಸಲು ಯಶಸ್ವಿ ರೈಲು ತಡೆ
ಬೆಂಗಳೂರು, ಜ.7: ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಪರಮ ಅನ್ಯಾಯವನ್ನು ಪ್ರತಿಭಟಿಸಲು ಕರ್ನಾಟಕ ರಕ್ಷಣಾ ವೇದಿಕೆ ಕೊಟ್ಟಿದ್ದ "ರಾಜ್ಯವ್ಯಾಪಿ ರೈಲು ತಡೆ ಚಳುವಳಿ" ಯಶಸ್ವಿಯಾಯಿತು. ರಾಜ್ಯದ ಬಹುತೇಕ ಎಲ್ಲ ರೈಲು ನಿಲ್ದಾಣಗಳಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ರೈಲು ಹಳಿಗಳ ಮೇಲೆ ಮಲಗುವ ಮೂಲಕ ರೈಲುಗಳನ್ನು ತಡೆದು ಪ್ರತಿಭಟಿಸಿದರು.
ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯನ ಗೌಡ ಅವರ ನೇತೃತ್ವದಲ್ಲಿ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ, ಯಶವಂತಪುರ ಹಾಗೂ ದಂಡು ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ರೈಲು ತಡೆ ಚಳುವಳಿಯನ್ನು ಯಶಸ್ವಿಗೊಳಿಸಿದರು. ರಾಮನಗರ, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಬಳ್ಳಾರಿ, ಬಾಗಲಕೋಟೆ, ರಾಯಚೂರು, ಗುಲ್ಬರ್ಗಾ, ಗದಗ, ಕೊಪ್ಪಳ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಇದೇ ಮಾದರಿಯ ಪ್ರತಿಭಟನೆ ನಡೆಸಲಾಯಿತು.
ಎಲ್ಲಾ ರೈಲು ನಿಲ್ದಾಣಗಳಲ್ಲೂ ರೈಲುಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಲಾಯಿತು. ಅಲ್ಲಲ್ಲಿ ಪೊಲೀಸರು ಮತ್ತು ರಕ್ಷಣಾ ವೇದಿಕೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ವೇದಿಕೆ ನಡೆಸುತ್ತಿರುವ ಈ ಹೋರಾಟಕ್ಕೆ ಇತರ ಕನ್ನಡಪರ ಸಂಘಟನೆಗಳಾದ ರೈತಸಂಘ, ಡಿಎಸ್ಎಸ್, ಸಮತಾ ಸೈನಿಕ ದಳ, ಅಂಬರೀಶ್ ಅಭಿಮಾನಿಗಳ ಸಂಘ, ಕನ್ನಡ ವಕೀಲರ ವೇದಿಕೆ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿವೆ.
ಪ್ರತಿಭಟನೆಯಲ್ಲಿ ಡಾ. ರಾಜ್ಕುಮಾರ್ ಅಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ಶಿವಶಂಕರ್, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಕಾರ್ಯಕರ್ತರೊಂದಿಗೆ ರೈಲು ತಡೆ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಭಟನೆಯ ಕೂಗು ಲಾಲು ಕಿವಿಗಳಿಗೆ ಬೀಳಲಿ ಎಂದು ಕನ್ನಡಿಗರು ನಿರೀಕ್ಷಿಸುತ್ತಿದ್ದಾರೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications