ಮಂಗಳೂರಲ್ಲಿ ಪುತ್ತಿಗೆಶ್ರೀ ಸುಗುಣೇಂದ್ರ ತೀರ್ಥರಿಗೆ ಇಂದು ಸನ್ಮಾನ
ಉತ್ತರ ಅಮೆರಿಕಾಗೆ ಹೋಗಿ ವಾಪಸ್ಸಾದ ಮಾಧ್ವ ಸನ್ಯಾಸಿ ಶ್ರೀಸುಗುಣೇಂದ್ರ ತೀರ್ಥ ಸ್ವಾಮಿಗಳು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠ ಅಲಂಕರಿಸಲು ಸಜ್ಜಾಗಿರುವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೊಂದು ಏರ್ಪಾಡಾಗಿದೆ. ಬುಧವಾರ ಗೋಧೂಳಿ ಸಮಯಕ್ಕೆ ಸರಿಯಾಗಿ ಮಂಗಳೂರಿನ ಪುರಭವನದಲ್ಲಿ ಜರಗುವ ಸಂಮಾನ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಜಮಾಯಿಸುವ ಲಕ್ಷಣಗಳು ಕಂಡುಬರುತ್ತಿವೆ.
ಅಮೆರಿಕಾಗೆ ಪ್ರಯಾಣಮಾಡಿ ಧರ್ಮಪ್ರಚಾರ ಮಾಡಿರುವ ಹೆಗ್ಗಳಿಗೆ ಮತ್ತು ಮಠದ ಸನ್ಯಾಸಿಗಳು ಸಾಗರೋಲ್ಲಂಘನ ಮಾಡಬಾರದು ಹಾಗೂ ಮಾಡಿದರೆ ಶ್ರೀಕೃಷ್ಣ ಪೂಜೆಯ ಹಕ್ಕು ಕಳೆದುಕೊಳ್ಳುತ್ತಾರೆ ಎಂಬ ಅಗ್ಗಳಿಕೆಗಳ ತುಳಸಿ ಮಾಲೆಗಳು ಪುತ್ತಿಗೆ ಸ್ವಾಮೀಜಿಗಳ ಕೊರಳಲ್ಲಿ ರಾರಾಜಿಸುತ್ತಿವೆ.
ಯಾರು ಏನೇ ಹೇಳಲಿ, ತಾವಂತೂ ಕ್ರಮದಂತೆ ಪೀಠಾರೋಹಣ ಮಾಡಿ, ಶ್ರೀಕೃಷ್ಣ ಪೂಜಾ ಕೈಕಂರ್ಯ ಕೈಗೊಳ್ಳುವುದು ಶತಸ್ಸಿದ್ಧ ಎಂದು ಸಾರಿರುವ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ವಿದಿಬದ್ಧವಾಗಿ ಇದೇ 28ರ ಶುಕ್ರವಾರ ಉಡುಪಿ ಪುರಪ್ರವೇಶ ಮಾಡಲು ಸನ್ನದ್ಧರಾಗಿದ್ದಾರೆ. ತಮ್ಮ ಪರ್ಯಾಯ ಪರ್ವಕಾಲದಲ್ಲಿ ಸುಂದರ ಉಡುಪಿ ನಿರ್ಮಾಣ, ಶ್ರೀಕೃಷ್ಣನಿಗೆ ರತ್ನ ರಥ, ಶ್ರೀಕೃಷ್ಣ ನ್ಯಾಯಾಲಯ ಸ್ಥಾಪಿಸುವ ಉದ್ದೇಶ ಅವರಿಗಿದೆ. ಭಾರತದ ಭಕ್ತಗಣದ ಒಂದು ವರ್ಗ ಹಾಗೂ ಎನ್ ಆರ್ ಐ ಭಕ್ತಗಣದ ಬೆಂಬಲವನ್ನು ಶ್ರೀಗಳು ಹೊಂದಿದ್ದಾರೆ.
ಇದೇ ವೇಳೆ, ಉಡುಪಿ ವಿವಾದದಲ್ಲಿ ಪ್ರಧಾನವಾಗಿ ಎರಡು ಗುಂಪುಗಳು ಚಲನಶೀಲವಾಗಿವೆ. ಸುಧಾರಣೆಯ ನೆಪದಲ್ಲಿ ಮಠದ ಮೂಲಪರಂಪರೆಗೆ ಎಳ್ಳುನೀರು ಬಿಡಬಾರದೆಂದು ಒಂದು ಗುಂಪೂ (ಈ ಗುಂಪಿನಲ್ಲಿ ಶ್ರೀ ಪೇಜಾವರರು ಇದ್ದಾರೆ), ಸಂಪ್ರದಾಯ ಸುಧಾರಣೆ ಆಗಬೇಕೆಂದು ವಾದಿಸುವ ಇನ್ನೊಂದು ಗುಂಪೂ ಇದೆ. ಎರಡನೆಯ ಗುಂಪು ಒಂದು ಸಮಿತಿಯನ್ನು ರಚಿಸಿಕೊಂಡಿದ್ದು ಆ ಸಮಿತಿಯಲ್ಲಿ ಕೋಟೇಶ್ವರ ಸೂರ್ಯನಾರಾಯಣ, ಸತ್ಯರಾಜ್, ಪ್ರೊ. ರಾಧಾಕೃಷ್ಣ ಮುಂತಾದವರಿದ್ದಾರೆ.
ಶ್ರೀ ಕೃಷ್ಣ ಪೂಜಾ ಹಕ್ಕು ಕುರಿಂತೆ ಉಧ್ಬವವಾಗಿರುವ ಈ ಜಿಜ್ಞಾಸೆ ಹೇಗೆ ಇತ್ಯರ್ಥವಾಗುವುದೋ ಕಾದು ನೋಡಬೇಕಾಗಿದೆ. ಮುಂದೆ ಏನಾಗುತ್ತದೋ ಆ ಕೃಷ್ಣಪರಮಾತ್ಮನಿಗೇ ಗೊತ್ತು ಎಂದು ಪುತ್ತಿಗೆ ಶ್ರೀಗಳು ಹೇಳಿಕೆ ಕೊಟ್ಟಿದ್ದಾರೆ. ಪರಿಶುದ್ಧವಾದಿಗಳು(Puritans), ಕರ್ಮಠ ಮಾಧ್ವ ಜನಾಂಗದವರು, ಕೃಷ್ಣಾರ್ಪಣಮಸ್ತು ಎನ್ನುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಪುತ್ತಿಗೆ
ಶ್ರೀಗಳಿಗೆ
ಪೂಜೆ
ಅಧಿಕಾರ
ಮೊಟಕು
ಏಕೆ?
ಗುರುಗಳೇ,
ಮಡಿಯಾವುದು
ಮೈಲಿಗೆ
ಯಾವುದು?