ರಾಮೇಶ್ವರ ಏನ್ ಹೇಳಿದ್ರೋ; ಪ್ರತಿಭಾ ಏನ್ ಮಾಡ್ತಾರೋ?
ಬೆಂಗಳೂರು, ನ.02 : ರಾಜಕೀಯ ವಲಯದಲ್ಲಿ ಗೊಂದಲದ ವಾತಾವರಣ ಶುಕ್ರವಾರವೂ(ನ.02) ಮುಂದುವರೆದಿದೆ. ಬಿಜೆಪಿಗೆ ಅಧಿಕಾರ ದಕ್ಕುವುದೇ, ಇಲ್ಲವೇ? ಅಥವಾ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಯಾರಲ್ಲೂ ಇಲ್ಲ. ಇಂದು ಸರ್ಕಾರ ರಚನೆಗೆ ರಾಜ್ಯಪಾಲರಿಂದ ಆಹ್ವಾನ ದೊರಕುವ ನಿರೀಕ್ಷೆ ಇದೆ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಿರುವನಂತಪುರದಿಂದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ , ನವದೆಹಲಿಗೆ ಮರಳಲಿದ್ದಾರೆ. ಎಲ್ಲರ ಕಣ್ಣು ರಾಷ್ಟ್ರಪತಿಗಳ ನಿರ್ಧಾರದ ಮೇಲೆ ನೆಟ್ಟಿವೆ. ಗುರುವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಕರ್ನಾಟಕದ ರಾಜಕಾರಣ ಚರ್ಚೆಯಾಗಲಿಲ್ಲ.
ರಾಜ್ಯಪಾಲ ರಾಮೇಶ್ವರ ಠಾಕೂರು ಅವರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಒತ್ತಡ ದಿನೇದಿನೇ ಹೆಚ್ಚುತ್ತಲೇ ಇದೆ. ಸರ್ಕಾರ ರಚನೆಗೂ ಮುನ್ನವೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಷರತ್ತುಗಳು ಸಂಘರ್ಷ ಆರಂಭಗೊಂಡಿದೆ. ಸರ್ಕಾರ ರಚನೆಗೆ ಮುನ್ನವೇ ಹೀಗೆ, ರಚನೆಯ ನಂತರ ಸರ್ಕಾರ ನಡೆಸಲು ಇವರು ಬಿಡುತ್ತಾರೆಯೇ ಎಂಬುದು ಬಿಜೆಪಿ ವಲಯದಲ್ಲಿನ ಪ್ರಶ್ನೆ. ಬೆಂಗಳೂರಿನಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಗಳಿಗೆ ಮರಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)