ಕ್ರಿಶ್ಚಿಯನ್ನರು ಸ್ವರ್ಗಕ್ಕೆ;ಹಿಂದೂಗಳು ನರಕಕ್ಕೆ ಹೋಗ್ತಾರೆ!?
ಡರ್ಬಾನ್, ಅ.30 : ಪ್ರಪಂಚವೆಲ್ಲಾ ಇಂಟರ್ನೆಟ್ ಎಂಬ ಜೇಡರ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೆ, ಈ ಧರ್ಮಾಂಧರು ಮತ್ತು ಮತಾಂಧರು ಮಾತ್ರ ಮೌಢ್ಯದ ಕುಲುಮೆಯಲ್ಲಿ ಬೇಯುತ್ತಿದ್ದಾರೆ ಅನ್ನುವುದಕ್ಕೊಂದು ನಿದರ್ಶನ ಇಲ್ಲಿದೆ.
ಡರ್ಬಾನ್ನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ಹಿಂದೂಗಳ ಅವಹೇಳನ ಮಾಡಿದ ಘಟನೆ ವರದಿಯಾಗಿದೆ. ಶಾಲೆಯಲ್ಲಿ ಧಾರ್ಮಿಕ ವಿಷಯ ಕುರಿತು ಚರ್ಚೆ ನಡೆಯುತ್ತಿತ್ತು. ಅದೇ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳು ತಾನು ಹಿಂದುಧರ್ಮಕ್ಕೆ ಸೇರಿರುವುದಾಗಿ ತಿಳಿಸಿದಳು. ಆಗ ಶಿಕ್ಷಕಿ, ನೀವು ಹಿಂದುಗಳು ಮೂರ್ತಿಪೂಜೆ ಮಾಡುತ್ತೀರ. ನೀವು ನರಕಕ್ಕೆ ಹೋಗುತ್ತೀರಿ. ಕ್ರೈಸ್ತರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ. ನಿಮಗಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿದ್ಯಾರ್ಥಿನಿ ಹಾಗೂ ಧರ್ಮದ ಬಗ್ಗೆ ವ್ಯಂಗ್ಯವಾಡಿದ್ದಾಳೆ.
ನಾನು ಈ ಸುದ್ದಿಯಿಂದ ವಿಚಲಿತನಾಗಿದ್ದೇನೆ. ದಕ್ಷಿಣ ಆಫ್ರಿಕಾ ಸರ್ವಧರ್ಮಗಳನ್ನು ಸಮಾನವಾಗಿ ಕಾಣುವ ದೇಶ. ಕೆಲವು ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಮಾನವ ಹಕ್ಕುಗಳ ಆಯೊಗದ ಅಧ್ಯಕ್ಷರಾದ ಜೋಡಿ ಕೊಲ್ಲೆಫೆನ್ ಪ್ರತಿಕ್ರಿಯಿಸಿದ್ದಾರೆ.
ವಿದೇಶಗಳಲ್ಲಿ ಹಿಂದೂಧರ್ಮ, ಸಂಸ್ಕೃತಿ, ಸಂಪ್ರದಾಯಗಳ ವಿರುದ್ಧ ಈ ರೀತಿಯ ಅವಹೇಳನಕಾರಿ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಬಗ್ಗೆ ಸರಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವುದು ದುರಂತ.
(ಏಜನ್ಸೀಸ್)