ವಾಟಾಳ್ ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ : ಬಿಜೆಪಿ ಸಚಿವ
ಕನ್ನಡದ ಕಟ್ಟಾಳು ನೆಲ, ಜಲ, ಭಾಷೆಗಾಗಿ ಹೋರಾಡಿದ ವಾಟಾಳ್ ಮುಖ್ಯಮಂತ್ರಿಯಾಗಬೇಕೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರೇಗೌಡ ಗುರುವಾರ(ಸೆ.20) ಬೆಂಗಳೂರಿನಲ್ಲಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ ದಿವಂಗತ ಜಿ. ನಾರಾಯಣ ರಾವ್ರ ನೆನಪು, ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೀಗೆ ಹೇಳಿದರು. ಕನ್ನಡದ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು. ಇದಕ್ಕಾಗಿ ಕನ್ನಡ ಚಳುವಳಿಗಾರರೆಲ್ಲಾ ಒಂದಾಗಬೇಕೆಂದು ಕರೆ ನೀಡಿದರು.
ಕನ್ನಡ ಚಳವಳಿಗಾರರು ಸತ್ಯಹರಿಶ್ಚಂದ್ರರಿದ್ದಂತೆ. ಮನಸ್ಸು ಮಾಡಿದ್ದರೆ ಅರ್ಧ ಬೆಂಗಳೂರನ್ನು ಬರೆಸಿಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡದೆ ಕನ್ನಡಕ್ಕಾಗಿ ಹೋರಾಡಿದ್ದಾರೆ ಎಂದು ವಾಟಾಳ್ ಹೇಳಿದರು.
ಸಮಾರಂಭದಲ್ಲಿ ಹೆಚ್ಚುವರಿ ಡಿಜಿಪಿ ಶಂಕರ ಬಿದರಿ, ಶಿಕ್ಷಣ ತಜ್ಞ ಎನ್.ಎಸ್.ಕಾತರ್ಕಿ,ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಕೃಷ್ಣಪ್ಪ, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಆಗಮಿಸಿದ್ದರು.
***
ಒಂದು ಸಾಲಿನ ಸುದ್ದಿಗಳು :
- ನೆರೆ ಪೀಡಿತರಿಗೆ ಮುಂದಿನ ಹತ್ತು ದಿನಗಳಲ್ಲಿ ಪರಿಹಾರ ಧನ ವಿತರಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ.
- ಸದ್ಯದಲ್ಲೇ ಒಸಮಾ ಬಿನ್ ಲಾಡೆನ್ ನಿಂದ ಹೊಸ ವಿಡಿಯೋ ಕ್ಯಾಸೆಟ್ ಬಿಡುಗಡೆ.. ಪರ್ವೇಜ್ ಬಗ್ಗೆ ಲಾಡೆನ್ ಗೆ ಸಿಟ್ಟಿದೆ : ಲಷ್ಕರ್ ತೋಯ್ಬಾ ಹೇಳಿಕೆ
- ಕೇಂದ್ರದಲ್ಲಿ ಯಾವಾಗ ಬೇಕಾದರೂ ಸರ್ಕಾರ ಉರುಳಬಹುದು. ಮಧ್ಯಂತರ ಚುನಾವಣೆಗೆ ಸಜ್ಜಾಗಿ : ಬಿಜೆಪಿ ಕಾರ್ಯಕರ್ತರಿಗೆ ಎಲ್.ಕೆ.ಆಡ್ವಾಣಿ ಕರೆ.
- ಅಕ್ಟೋಬರ್ 8ರಂದು ಪಾಕ್ ಅಧ್ಯಕ್ಷರ ಚುನಾವಣೆ : ಸದ್ಯದಲ್ಲೇ ಪ್ರಕಟಣೆ ಹೊರಬೀಳುವ ನಿರೀಕ್ಷೆ.












Click it and Unblock the Notifications