ಹೆಚ್ಚುತ್ತಿರುವ ಭೂಮಿಯ ತಾಪ : ಜನಜಾಗೃತಿಗೆ ಯುವಕನ ಓಟ
ಬೆಂಗಳೂರು, ಸೆಪ್ಟೆಂಬರ್ 07 : ಸಿಗ್ನಲ್ನಲ್ಲಿ ಹಸಿರು ದೀಪ ಬರಲು ಇನ್ನು ಮೂರು ನಿಮಿಷಗಳಿದ್ದರೂ ಸ್ಕೂಟರು, ಲಾರಿ, ಬಸ್ಸುಗಳು ಗುರುಗುರು ಅನ್ನುತ್ತ ಬುಸುಬುಸು ಹೊಗೆ ಬಿಡುತ್ತಲೇ ಇರುತ್ತವೆ. ಗಲ್ಲಿಯಲ್ಲಿ ಅಮೂಲ್ಯವಾದ ನೀರು ನಲ್ಲಿಯಿಂದ ಸುರಿಯುತ್ತಿದ್ದರೆ ಅದಕ್ಕೆ ಒಂದು ಬಿರಡೆ ಹಾಕಲು ಯಾರೂ ಮುಂದೆ ಬರುವುದಿಲ್ಲ. ಮನೆಯ ಬಳಿಯ ಗಿಡ ಕತ್ತರಿಸುತ್ತಿದ್ದರೆ, ಕಸದ ರಾಶಿಯನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡುತ್ತಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುವುದೂ ಇಲ್ಲ.
ಅನೇಕರು ತಲೆಕೆಡಿಸಿಕೊಂಡಿರುತ್ತಾರೆ ಆದರೆ ತನ್ನೊಬ್ಬನಿಂದಲೇ ಬದಲಾವಣೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಬಿಡುತ್ತಾರೆ. ಈ ಬಗ್ಗೆ ಏನಾದರೂ ಮಾಡಲೇಬೇಕು ಎಂದು ಪಣತೊಟ್ಟ ನಗರದ ಯುವಕನೊಬ್ಬ ಕಾಲಿಗೆ ಚಕ್ರಕಟ್ಟಿಕೊಂಡು ಜನಜಾಗೃತಿಗೆ ಸಿದ್ಧನಾಗಿದ್ದಾನೆ. ಆತ ಸಮೀಮ್ ರಿಜ್ವಿ.
ಭೂಮಿಯ ತಾಪ ದಿನೇ ದಿನೇ ಏರುತ್ತಿದೆ. ವಾಯುಮಾಲಿನ್ಯ ಕಡಿಮೆ ಮಾಡಿ, ಹಸಿರು ಹೆಚ್ಚಿಸುವ ನಿಟ್ಟಿನಲ್ಲಿ ಜನಜಾಗೃತಿ ಹೆಚ್ಚಿಸಿದರೆ ಜಾಗತಿಕ ಬಿಸಿಯನ್ನು ಸ್ವಲ್ಪವಾದರೂ ತಗ್ಗಿಸಲು ಸಾಧ್ಯವೆಂದು ನಂಬಿ ಏಕಾಂಗಿಯಾಗಿ ಓಟಕ್ಕೆ ಸಿದ್ಧನಾಗಿದ್ದಾರೆ ಸಮೀಮ್.
ಬೆಂಗಳೂರಿನ ವಿಧಾನಸೌಧದಿಂದ ಮುಂಬೈನ ಗೇಟ್ವೇ ಆಫ್ ಇಂಡಿಯಾವರೆಗೆ ಓಡಿ ಹಾದಿಯಲ್ಲಿ ಬರುವ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ವಾಯುಮಾಲಿನ್ಯ, ನೀರಿನ ದುಂದುವೆಚ್ಚ, ಸೌಕರ್ಯಗಳ ದುರ್ಬಳಕೆಗಳ ಬಗ್ಗೆ ಅರಿವು ಮೂಡಿಸುವುದು ರಿಜ್ವಿ ಉದ್ದೇಶ.
22 ದಿನಗಳ ಓಟದಲ್ಲಿ ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ, ಕೊಲ್ಹಾಪುರ, ಸಾತಾರಾ, ಪುಣೆ, ಮುಂಬೈಗಳಲ್ಲಿನ ಶಾಲೆಗಳನ್ನು ಭೇಟಿ ಮಾಡುವ ಉದ್ದೇಶ ರಿಜ್ವಿ ಹೊಂದಿದ್ದಾರೆ. ಮುಂಬೈವರೆಗೆ ಸಾವಿರದ ನೂರು ಕಿ.ಮೀ.ಕಾಲಿನಲ್ಲಿ ಕ್ರಮಿಸಿ ವಾಪಸು ಬರುವಾಗ ಇನ್ನೊಬ್ಬ ಸಾಥಿ ವಿಭೋರ್ನೊಂದಿಗೆ ಸೈಕಲ್ನಲ್ಲಿ ಬೆಂಗಳೂರಿಗೆ ಬರಲಿದ್ದಾರೆ.
ಭೇಟಿ ಮಾಡಿದ ಶಾಲಾ ಮುಖ್ಯಸ್ಥರಿಂದ ಜಾಗೃತಿಯ ಕುರಿತು ಅರ್ಜಿಯೊಂದಕ್ಕೆ ಸಹಿ ಹಾಕಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ಉದ್ದೇಶ ರಿಜ್ವಿಯದು. ಇಂಥದೇನಾದರೂ ಬದಲಾವಣೆ ಬಯಸಿದರೆ ಅದು ವಿದ್ಯಾರ್ಥಿಗಳಿಂದಲೇ ಸಾಧ್ಯ ಎಂದು ರಿಜ್ವಿ ನಂಬಿದ್ದಾರೆ.
ವೃತ್ತಿಯಿಂದ ಮಾಡೆಲ್ ಆಗಿರುವ ರಿಜ್ವಿಯೊಂದಿಗೆ ಈ ಜಾಗತಿಕ ತಾಪಮಾನ ಇಳಿಸುವ ಅಭಿಯಾನದಲ್ಲಿ ಮಾಡೆಲಿಂಗ್ ಕ್ಷೇತ್ರದ ಕೆಲ ಯುವಕ ಯುವತಿಯರೂ ಕೈಜೋಡಿಸಿದ್ದಾರೆ.
ಈ ಅಭಿಯಾನಕ್ಕೆ ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ನಿಮ್ಮ ಬೆಂಬಲವಿರಲಿ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications