ಕೃಷ್ಣಜನ್ಮಾಷ್ಟಮಿಯಂದು ತೂಗಿರೆ ರಂಗನ ತೂಗಿರೆ ಕೃಷ್ಣನ
ಮುಂಬೈ, ಸೆಪ್ಟೆಂಬರ್ 03 : ಕೃಷ್ಣ ಭೂಲೋಕದಲ್ಲಂತೂ ಸರ್ವಾಂತರ್ಯಾಮಿ. ಇಸ್ಕಾನ್ನ ಜಾಗತೀಕರಣದಿಂದಾಗಿ ವಿಶ್ವದ ಎಲ್ಲೆಡೆ ಕೃಷ್ಣ ಪೂಜನೀಯ. ಮಂಗಳವಾರ ಸೆಪ್ಟೆಂಬರ್ 4ರಂದು ಆಚರಿಸಲಾಗುತ್ತಿರುವ ಕೃಷ್ಣಜನ್ಮಾಷ್ಟಮಿಯಂದು ತೊಟ್ಟಿಲಲ್ಲಿ ತೂಗುವ ಪುಟ್ಟಪುಟಾಣಿ ಕೃಷ್ಣನ ತೂಗಲು ಎಲ್ಲ ದೇವಸ್ಥಾನಗಳಲ್ಲಿ ನೂಕುನುಗ್ಗಲು, ಉದ್ದುದ್ದ ಕ್ಯೂ. ಕಣ್ಣಿಗೆ ಕಂಡ ಚುಲ್ಟಾರಿಗಳೆಲ್ಲ ಪುಟ್ಟ ಕೃಷ್ಣರಂತೆ ಕಾಣುತ್ತಾರೆ. ಮಕ್ಕಳು ಬಾಲಕೃಷ್ಣನ 'ಅವತಾರ' ಧರಿಸಿ ಸಂಭ್ರಮಿಸುತ್ತಾರೆ.
ಕೃಷ್ಣಜನ್ಮಾಷ್ಟಮಿಯೆಂದರೆ ಅಷ್ಟೇ ಅಲ್ಲ. ರುಚಿರುಚಿಯಾದ ಮೊಸರವಲಕ್ಕಿ, ಭತ್ತದರಳಿನಿಂದ ಮಾಡಿದ ದೊಡ್ಡ ಉಂಡೆ, ಕಾಜುನಿಂದ ಮಾಡಿದ ಸಿಹಿಪದಾರ್ಥ, ಗೊಜ್ಜವಲಕ್ಕಿ, ಕೋಲಾಟ, ಭಜನೆ, ಕೃಷ್ಣ ಭಗವಾನ್ಕಿ ಜೈ.
ಕೃಷ್ಣಜನ್ಮಾಷ್ಟಮಿಯೆಂದರೆ ಇನ್ನೊಂದು ವಿಶೇಷವಿದೆ. ಮುಂಬೈನಲ್ಲಿ ಹೆಚ್ಚಾಗಿ ಆಚರಣೆಯಲ್ಲಿರುವ ಮಾನವ ಪಿರಾಮಿಡ್ ಮಾಡಿ ಮೊಸರಿನ ಮಡಿಕೆ ಒಡೆಯುವ ಹಬ್ಬ. 'ಗೋವಿಂದಾ ಆಲಾರೇ ಆಲಾ ಮಟಕಿ ಸಂಭಾಲ ಬ್ರಿಜಬಾಲಾ' ಎಂದು ಹಾಡಿ ನಲಿಯುತ್ತಾ ಬರುವ ಬಣ್ಣದ ಬನಿಯನ್ನು, ಚಡ್ಡಿ ಧರಿಸಿದ ಗೋಪಾಲಕರು ಪಿರಾಮಿಡ್ ಮಾಡಿ ಕಟ್ಟಡದೆತ್ತರಕ್ಕೆ ಹಗ್ಗದಲ್ಲಿ ಕಟ್ಟಿದ ಮೊಸರಿನ ಮಡಿಕೆಯನ್ನು ಒಡೆಯುವ ಕಸರತ್ತು. ಸ್ವಲ್ಪ ಆಯತಪ್ಪಿದರೂ ಮೇಲಿದ್ದವ ಗೋವಿಂದಾ ಗೋವಿಂದಾ!