ಜಗನ್ನಾಥ ರಥಯಾತ್ರೆ ಆರಂಭ; ಭಕ್ತಾದಿಗಳಿಗೆ ಜೀವ ವಿಮೆ
ಪುರಿ, ಜುಲೈ 16 : ಐತಿಹಾಸಿಕ ಒಂಭತ್ತು ದಿನಗಳ ಪುರಿ ಜಗನ್ನಾಥ ರಥಯಾತ್ರೆ ಸೋಮವಾರ ಇಲ್ಲಿ ಭಕ್ತಿಪರವಶತೆಯಿಂದ ಆರಂಭಗೊಂಡಿತು. ಸ್ವಾಮಿ ಜಗನ್ನಾಥನ ದೊಡ್ಡಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಳ ಜತೆ ಆರಂಭವಾದ ಜಗನ್ನಾಥನ ವಿಶ್ವವಿಖ್ಯಾತ ರಥಯಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಸಾಕ್ಷಿಯಾದರು.
ರಥಯಾತ್ರೆಯ ಧಾರ್ಮಿಕ ವಿಧಿವಿಧಾನಗಳ ನಂತರ ಮೂಲ ವಿಗ್ರಹಗಳನ್ನು ದೇವಸ್ಥಾನದ ಅಂಗಳದಿಂದ ಅಲಂಕೃತಗೊಂಡ ತೇರುಗಳಿಗೆ ತರಲಾಯಿತು. ಇಂದು ಹೊರಟ ರಥಗಳು ಅಂತಿಮವಾಗಿ ಗುಂಡೀಚ ಪವಿತ್ರಧಾಮವನ್ನು ತಲುಪುತ್ತವೆ. ಅಲ್ಲಿ ಒಂಭತ್ತು ದಿನಗಳ ವಾಸ್ತವ್ಯದ ನಂತರ ಜಗನ್ನಾಥನ ಮರು ರಥಯಾತ್ರೆ ಪುನಃ ಪುರಿಯ ದೇವಸ್ಥಾನಕ್ಕೆ ವಾಪಸ್ಸು ಬರುತ್ತದೆ.
ಯಾತ್ರಾರ್ಥಿಗಳ ಕ್ಷೇಮವನ್ನು ಗಮನದಲ್ಲಿಟ್ಟಿರುವ ಸ್ಥಳೀಯ ಆಡಳಿತವು ಪ್ರತಿಯೊಬ್ಬ ಯಾತ್ರಾರ್ಥಿಗೂ 5 ಲಕ್ಷ ರೂಗಳ ಜೀವ ವಿಮೆ ಮಾಡಿಸಿದೆ. ಅಪಘಾತ ಮತ್ತಿತರ ಕಾರಣಗಳಿಂದಾಗಿ ಜೀವಹಾನಿ ಅಥವಾ ಶಾಶ್ವತ ಅಂಗವಿಕಲತೆ ಉಂಟಾದರೆ ವಿಮಾಸೌಲಭ್ಯ ಭಕ್ತಾದಿಗಳಿಗೆ ದೊರೆಯುತ್ತದೆ. ಪುರಿ ಮುನಿಸಿಪಲ್ ಆಡಳಿತವಿರುವ ಪ್ರದೇಶಕ್ಕೆ ಮಾತ್ರ ಈ ವಿಮಾ ಸೌಲಭ್ಯ ಅನ್ವಯ.
ಭಕ್ತಾದಿಗಳ ಚಲನವಲನ ಗಮನಿಸುವುದಕ್ಕೆ ನೂರಾರು ಸಂಖ್ಯೆಯಲ್ಲಿ ಕ್ಯಾಮೆರಾಗಳನ್ನು ಯಾತ್ರೆಯ ದಾರಿಗುಂಟ ಇಡಲಾಗಿದೆ.
(ಯು ಎನ್ಐ)