ಮುತ್ತಪ್ಪ ರೈ ಖುಲಾಸೆ ಊರ್ಜಿತ, ಸರ್ಕಾರಕ್ಕೆ ಮುಖಭಂಗ
ಬೆಂಗಳೂರು : ಅಗ್ನಿ ಶ್ರೀಧರ್ ಬಲಗೈ ಬಂಟ ಸೀನ ಹತ್ಯೆ ಪ್ರಕರಣದಲ್ಲಿ ಮುತ್ತಪ್ಪ ರೈ ಖುಲಾಸೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.
ನ್ಯಾಯಮೂರ್ತಿ ಮುಂಜುಳಾ ಚೆಲ್ಲೂರ್ ಹಾಗೂ ನ್ಯಾಯಮೂರ್ತಿ ಎನ್.ಆನಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಬುಧವಾರ(ಜನವರಿ 17) ವಿಚಾರಣೆ ಕೈಗೆತ್ತಿಕೊಂಡು, ಕೆಳ ನ್ಯಾಯಾಲಯ ಮುತ್ತಪ್ಪ ರೈ ಖುಲಾಸೆಗೊಳಿಸಿದ್ದನ್ನು ಎತ್ತಿ ಹಿಡಿಯಿತು.
ಹಿನ್ನೋಟ : 1997ರ ಜುಲೈ 1ರಂದು ಶ್ರೀಧರಮೂರ್ತಿ, ಅಮಾನುಲ್ಲಾ ಬಚ್ಚನ್ರನ್ನು ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ಸುಪಾರಿ ಹಂತಕರು ಶ್ರೀಧರ್ ಕಾರಿನಲ್ಲಿ ಹೋಗುತ್ತಿದ್ದ ಶ್ರೀನಿವಾಸ ಬಾಬು(ಸೀನ)ನನ್ನು ಶ್ರೀಧರ್ ಎಂದು ಪರಿಗಣಿಸಿ ಹತ್ಯೆಗೈದಿದ್ದರು. ಈ ಹತ್ಯೆಯಲ್ಲಿ ಮುತ್ತಪ್ಪ ರೈ ನೇರ ಕೈವಾಡ ಇದೆ ಎಂದು ಪೊಲೀಸರು ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣಾ ನ್ಯಾಯಾಲಯ ಮೇ 30, 2003ರಂದು ಮುತ್ತಪ್ಪ ರೈ ಹಾಗೂ ಇತರ 17 ವ್ಯಕ್ತಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ರಾಜ್ಯ ಸರ್ಕಾರ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರೈ ವಿರುದ್ಧ ಮಾತ್ರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇತರ ಖುಲಾಸಿತ ವ್ಯಕ್ತಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಿರಲಿಲ್ಲ. ಇದನ್ನು ಪರಿಗಣನೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ ಸರ್ಕಾರದ ಮೇಲ್ಮನವಿಯನ್ನು ತಳ್ಳಿಹಾಕಿದೆ.
ಈ ಪ್ರಕರಣದಲ್ಲಿ ಪೊಲೀಸರು ಮುತ್ತಪ್ಪ ರೈ ಅವರನ್ನು ಭೂಗತ ದೊರೆ ಎಂದು ವರ್ಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications