ಕುವೆಂಪು-103 : ನಗರದಲ್ಲಿಂದು ಸಂಜೆ ಕಾವ್ಯಗಾಯನ
ಬೆಂಗಳೂರು : ಇಂದು ರಾಷ್ಟ್ರಕವಿ ಕುವೆಂಪು ಅವರ 103ನೇ ಜನ್ಮದಿನ. ಈ ಪ್ರಯುಕ್ತ ನಗರದಲ್ಲೊಂದು ವಿನೂತನ ಕಾರ್ಯಕ್ರಮ.
ಹೊಂಬೇಗೌಡ ನಗರದ ಆಟದ ಮೈದಾನದಲ್ಲಿ ಶುಕ್ರವಾರ ಸಂಜೆ 6.30ಕ್ಕೆ ಬಾರಿಸು ಕನ್ನಡ ಡಿಂಡಿಮವ ಎಂಬ ವಿಶಿಷ್ಟ ಸ್ಮರಣೆ. ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಎಚ್.ಕೆ.ನಾರಾಯಣ, ಯಶವಂತ ಹಳಿಬಂಡಿ, ಮಾಲತಿ ಶರ್ಮ, ಕಸ್ತೂರಿ ಶಂಕರ್ ಸೇರಿದಂತೆ 50ಮಂದಿ ಗಾಯಕರ ಶ್ರೀಮಂತ ಕಂಠದಲ್ಲಿ ಕುವೆಂಪು ಅವರ 50 ಗೀತೆಗಳನ್ನು ಕೇಳುವ ಸುಸಂದರ್ಭ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಸಂಘಟಿಸಿದ್ದು, ಕನ್ನಡ ಸಂಘರ್ಷ ಸಮಿತಿ ಮತ್ತು ಸಹ್ಯಾದ್ರಿ ಸಂಘಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ 50ಕ್ಕೂ ಅಧಿಕ ಗಣ್ಯರು ಪಾಲ್ಗೊಳ್ಳುವರು.
ಈ ಕಾರ್ಯಕ್ರಮವನ್ನು ಉದ್ಘಾಟಿಸುವ ವ್ಯಕ್ತಿ ಯಾರೆಂಬುದು ಸದ್ಯಕ್ಕೆ ಚಿದಂಬರ ರಹಸ್ಯ! ಯಾಕೆಂದರೆ ಯಾವ ಗಣ್ಯರನ್ನೂ ಈ ಕಾರ್ಯಕ್ಕೆ ಆಹ್ವಾನಿಸಿಲ್ಲ. ಕುವೆಂಪು ಅವರು ಗೌರವಿಸುವ ವ್ಯಕ್ತಿಯಾಬ್ಬ ಕಾರ್ಯಕ್ರಮ ಉದ್ಘಾಟಿಸುತ್ತಾನೆ ಎಂದು ಸಂಘಟಕರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)