81ನೇ ಹುಟ್ಟುಹಬ್ಬ ಆಚರಿಸಿಕೊಂಡ ಪುಟ್ಟಪರ್ತಿ ಸಾಯಿಬಾಬಾ
ಪುಟ್ಟಪರ್ತಿ : ಸಾಯಿಬಾಬಾ ಗುರುವಾರ ತಮ್ಮ 81ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಕುರಿತ ಸಮಾರಂಭ ಅದ್ಧೂರಿಯಿಂದ ನೆರವೇರಿತು.
ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಯಿಬಾಬಾ ಕುರಿತು ತಾವೇ ಬರೆದ ತಮಿಳು ಪದ್ಯವೊಂದನ್ನು ವಾಚಿಸಿದರು. ಅಲ್ಲದೆ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಕರ್ನಾಟಕ ರಾಜ್ಯಪಾಲ ಟಿ.ಎನ್.ಚತುರ್ವೇದಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಬಾಬಾ, ತಾವು ಆಚರಿಸುತ್ತಿರುವ ಧಾರ್ಮಿಕ ಚಟುವಟಿಕೆಗಳನ್ನು ಬೂಟಾಟಿಕೆ ಎಂದು ಕರೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ವಿಶೇಷ ರೈಲು : ಸಾಯಿಬಾಬಾ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರು ನಗರ ಹಾಗೂ ಶ್ರೀಸತ್ಯಸಾಯಿ ಪ್ರಶಾಂತಿ ನಿಲಯದ ಮಧ್ಯೆ ವಿಶೇಷ ರೈಲುಗಳು ಸಂಚರಿಸಲಿವೆ.
ಈ ಸಂದರ್ಭದಲ್ಲಿ ಉಂಟಾಗಬಹುದಾಗ ಜನಸಂದಣಿ ತಡೆಯುವ ನಿಟ್ಟಿನಲ್ಲಿ, ಗುರುವಾರದಿಂದ ಮೂರು ದಿನಗಳ ಕಾಲ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೇ ಪ್ರಕಟಣೆಯಾಂದರಲ್ಲಿ ತಿಳಿಸಿದೆ.
ಬೆಂಗಳೂರಿನಿಂದ ಬೆಳಗ್ಗೆ 07.15ಕ್ಕೆ ಹೊರಡುವ ರೈಲು 11.15ಕ್ಕೆ ಪ್ರಶಾಂತಿ ನಿಲಯ ತಲುಪಲಿದೆ. ಪ್ರಶಾಂತಿ ನಿಲಯದಿಂದ ಸಂಜೆ 04.00ಕ್ಕೆ ಮರಳುವ ರೈಲು ರಾತ್ರಿ 08.00ಕ್ಕೆ ಬೆಂಗಳೂರು ತಲುಪಲಿದೆ.
(ಏಜನ್ಸೀಸ್)