ವಾರಾಣಾಸಿ ಬಾಂಬ್ ಸ್ಫೋಟ : ಮೃತರ ಸಂಖ್ಯೆ28ಕ್ಕೆ ಹೆಚ್ಚಳ
ವಾರಾಣಾಸಿ ಬಾಂಬ್ ಸ್ಫೋಟ : ಮೃತರ ಸಂಖ್ಯೆ28ಕ್ಕೆ ಹೆಚ್ಚಳ
ದೇಶಾದ್ಯಂತ ಕಟ್ಟೆಚ್ಚರ, ಬುಷ್ ಭೇಟಿಗೂ ಬಾಂಬ್ ದಾಳಿಗೂ ಸಂಬಂಧ...!?
ಉಗ್ರರ ಕೃತ್ಯ ಇದಾಗಿರಬಹುದೆಂಬ ಬಲವಾದ ಶಂಕೆಗಳು ಎಲ್ಲೆಡೆ ಕೇಳಿಬಂದಿವೆ. ರಾಷ್ಟ್ರದೆಲ್ಲೆಡೆ ಬಿಗಿ ಕಟ್ಟೆಚ್ಚರ ವಹಿಸಲಾಗಿದ್ದು, ತನಿಖೆ ಮುಂದುವರೆದಿದೆ. ಘಟನೆಗೆ ಯುಪಿಎ ಮತ್ತು ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಕ್ಷಗಳು ದೂರಿವೆ.
ಘಟನೆಯ ವಿವರ : ಕಾಶಿ ವಿಶ್ವನಾಥನ ದೇವಸ್ಥಾನದ ಸಮೀಪದಲ್ಲಿಯೇ ಇರುವ ಸಂಕಟ ಮೋಚನ ಹನುಮಾನ್ ದೇವಸ್ಥಾನ ಮತ್ತು ವಾರಣಾಸಿಯ ದಂಡು ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ಶಕ್ತಿಯುತ ಬಾಂಬ್ಗಳು ಸ್ಫೋಟಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.
ಸಂಕಟ ಮೋಚನ ಹನುಮಾನ್ ದೇವಸ್ಥಾನದಲ್ಲಿ ಸಾಮಾನ್ಯವಾಗಿ ಮಂಗಳವಾರ ಹಾಗೂ ಶನಿವಾರ 6.30ಕ್ಕೆ ನಡೆಯುವ ಮಂಗಳಾರತಿಗಾಗಿ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿಯೇ ಮಂಗಳವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ.
ನೆರೆದವರೆಲ್ಲ ಭೀತಿಯಿಂದ ಘಟನಾ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ, ಭಾರೀ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಹಲವಾರು ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಸಮೀಪ ಹಾಗೂ ನಿಲ್ದಾಣದಲ್ಲಿದ್ದ ಬಸ್ಸಿನಲ್ಲಿ ಕೂಡ ಬಾಂಬ್ ಸ್ಫೋಟ ನಡೆದಿದೆ.
ಯಾರು ಕಾರಣ : ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಭಾರತಕ್ಕೆ ಭೇಟಿ ನೀಡಿದಾಗ, ಬುಷ್ ವಿರೋಧಿ ಪ್ರತಿಭಟನೆ ಹಾಗೂ ಪ್ರವಾದಿ ಮೊಹಮ್ಮದ್ ಕಾರ್ಟೂನ್ ವಿರೋಧಿ ಪ್ರತಿಭಟನೆ ನಡೆದವು. ಬುಷ್ ಭೇಟಿಗೂ ಈ ಸ್ಫೋಟಕ್ಕೂ ಸಂಬಂಧ ಇರಬಹುದು. ಇದನ್ನು ನಾನು ಅಲ್ಲಗಳೆಯಲಾರೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರು ಈ ಮಾತಿನ ಸ್ಪಷ್ಟೀಕರಣ ಬಯಸಿದಾಗ, ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಮೂಲಭೂತವಾದಕ್ಕೆ ಉತ್ತೇಜನ ನೀಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ವಿವರಿಸಿದರು.
ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆದ ಸ್ಫೋಟ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನಡೆದ ಸ್ಫೋಟ, ಇದೀಗ ವಾರಾಣಾಸಿಯಲ್ಲಿ ನಡೆದ ಸ್ಫೋಟ. ಹೀಗೆ ಇವೆಲ್ಲ ಸರಣಿ ಸ್ಫೋಟದ ಭಾಗಗಳು ಎಂದ ಅವರು, ಗಡಿಯಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಾಸಪಡಿಸಿಲ್ಲ. ಭಯೋತ್ಪಾದನೆಗೆ ಬೇಕಾದ ಮೂಲ ಸೌಕರ್ಯಗಳನ್ನು ನಾಶಗೊಳಿಸಿಲ್ಲ. ಹಾಗಾಗಿಯೇ ಭಯೋತ್ಪಾದನೆ ಇನ್ನೂ ಜೀವಂತವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲೂ ಕಟ್ಟೆಚ್ಚರ : ರಾಜ್ಯದ ಅನೇಕ ದೇವಾಲಯಗಳು, ಅಣೆಕಟ್ಟೆಗಳು ಹಾಗೂ ಪ್ರವಾಸಿ ತಾಣಗಳು ಉಗ್ರರ ಪಟ್ಟಿಯಲ್ಲಿವೆ ಎಂದು ತಿಳಿದುಬಂದಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications