ಸುನಾಮಿ ದುರಂತದ ನಿರಾಶ್ರಿತರಿಗೆ ‘ಧರ್ಮ’ ಸರ್ಕಾರದಿಂದ 5.5 ಕೋಟಿ
ಸುನಾಮಿ ದುರಂತದ ನಿರಾಶ್ರಿತರಿಗೆ ‘ಧರ್ಮ’ ಸರ್ಕಾರದಿಂದ 5.5 ಕೋಟಿ
ಸಚಿವರಿಂದ ಒಂದು ದಿನದ ವೇತನ, ಮೀನುಗಾರರಿಗೆ ಸೂಚನೆ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
ಸೋಮವಾರ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಎರಡು ಕೋಟಿ, ಆಂಧ್ರಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ತಲಾ ಒಂದು ಕೋಟಿ, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಹದಿನಾರು ದೋಣಿಗಳಿಗೆ ಧಕ್ಕೆಯಾಗಿದೆ. ಸೋಮವಾರ ರಾಜ್ಯದ ಎಲ್ಲ ಕರಾವಳಿ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಕಾಶ್ ಮತ್ತು ಆರ್.ವಿ.ದೇಶಪಾಂಡೆ ತಂಡ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದೆ. ಸಂಪುಟದ ಸಚಿವರು ಒಂದು ತಿಂಗಳ ವೇತನವನ್ನು ಕೊಡುಗೆಯಾಗಿ ನೀಡಿದ್ದಾರೆ. ಪರಿಹಾರ ನಿಧಿಗೆ ಒಂದು ದಿನದ ವೇತನವನ್ನು ನೀಡುವಂತೆ ಸರಕಾರಿ ನೌಕರರ ಮನವೊಲಿಸಲಾಗುವುದು ಎಂದು ಧರ್ಮಸಿಂಗ್ ಹೇಳಿದರು.
ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸುನಾಮಿ ಅಟ್ಟಹಾಸಕ್ಕೆ ಸಿಲುಕಿದ ರಾಜ್ಯಗಳಿಗೆ ಸರಕಾರ ಎಲ್ಲ ರೀತಿಯ ನೆರವನ್ನು ನೀಡಲಿದೆ. ಮುಖ್ಯ ಕಾರ್ಯದರ್ಶಿ ಕೆ.ಎಂ.ಮಿಶ್ರ ಸಂಬಂಧಿಸಿದ ರಾಜ್ಯಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಕಂದಾಯ ಸಚಿವ ಎಂ.ಪಿ.ಪ್ರಕಾಶ್, ರಾಜ್ಯದ ಐದು ವೈದ್ಯಕೀಯ ತಂಡಗಳು ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿವೆ. ಸೇವೆಗೆ ಮುಂದಾಗಿವೆ. ಕರ್ನಾಟಕ ಸರಕಾರ ಒಂದು ಲಕ್ಷ ರೂಗಳನ್ನು ದುರಂತದಲ್ಲಿ ಸಾವನ್ನಪ್ಪಿದ ಕನ್ನಡಿಗರ ಕುಟುಂಬಗಳಿಗೆ ನೆರವು ನೀಡಲು ಉದ್ದೇಶಿಸಿದೆ. ಸರಕಾರದ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ ಎಂದರು.
ನೆರವು : ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ, ಸುನಾಮಿ ಆರ್ಭಟವನ್ನು ರಾಷ್ಟ್ಟ್ರಿಯ ದುರಂತ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡುವುದಾಗಿ ಅವರು ಘೋಷಿಸಿದರು.
ಸ್ಥಳಾಂತರ : ಉಡುಪಿ ಮತ್ತು ಕುಂದಾಪುರ ತಾಲೂಕಿನಲ್ಲಿ ರಾಕ್ಷಸ ಕಡಲ ಅಲೆಯ ಪರಿಣಾಮ ಎಂಟು ದೋಣಿಗಳು ಮುರಿದಿವೆ. ಅಪಾರ ಸಂಖ್ಯೆಯ ತೆಂಗು, ತಾಳೆ ಮತ್ತಿತರ ಮರಗಳು ನೆಲಕ್ಕುರುಳಿವೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಂಜಾಗ್ರತೆ ಕ್ರಮವಾಗಿ ಉಡುಪಿಯ 5000 ಜನ ಮತ್ತು ಕುಂದಾಪುರ ತಾಲೂಕಿನ 2000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಲೆ ಮತು ವಿವಿಧ ಕಟ್ಟಡಗಳ ಬಳಸಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಸಮುದ್ರದತ್ತ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications