ಕಂಚಿ ಪ್ರಕರಣ: ರಾಜ್ಯದ ಮಠಾಧೀಶರು ಹಾಗೂ ಆಚಾರ್ಯರ ಸಭೆ
ಕಂಚಿ
ಪ್ರಕರಣ:
ರಾಜ್ಯದ
ಮಠಾಧೀಶರು
ಹಾಗೂ
ಆಚಾರ್ಯರ
ಸಭೆ
ಕೊಲೆ
ಆರೋಪದಲ್ಲಿ
ಕಂಚಿ
ಶ್ರೀಗಳನ್ನು
ನಡೆಸಿಕೊಂಡಿರುವ
ರೀತಿ
ಕುರಿತು
ರಾಜ್ಯದ
ಮಠಾಧೀಶರು
ಹಾಗೂ
ಆಚಾರ್ಯರಿಗೆ
ಆತಂಕ
ದಿಗ್ಭ್ರಮೆ.
ಅವರು
ಹೇಳೋದೇನೆಂದರೆ....
ಪ್ರಮುಖ ಧರ್ಮ ಹಾಗೂ ಮಠವೊಂದರ ಮುಖ್ಯಸ್ಥರನ್ನು ನಡೆಸಿಕೊಳ್ಳುವ ರೀತಿ ಇದಲ್ಲ . ಶಂಕರಾಚಾರ್ಯರ ವಿಷಯದಲ್ಲಿ ಕಾನೂನು ತನ್ನದೇ ರೀತಿಯಲ್ಲಿ ಸಾಗುತ್ತಿದೆ. ಹಿಂದೂ ಧರ್ಮವೊಂದರ ಪ್ರಮುಖ ವ್ಯಕ್ತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ನಮಗೆ ಆಘಾತ ಉಂಟು ಮಾಡಿದೆ ಎಂದು ಮಠಾಧೀಶರು ಹಾಗೂ ಆಚಾರ್ಯರ ಸಭೆ ಹೇಳಿದೆ. ನ.24ರ ಬುಧವಾರ ಬೆಂಗಳೂರಿನಲ್ಲಿ ಈ ಸಭೆ ನಡೆಯಿತು.
ಮಠಾಧೀಶರಾದ ನಾವುಗಳು ಕಾನೂನಿಗಿಂತ ದೊಡ್ಡವರೇನೂ ಅಲ್ಲ . ದೇಶದ ನಾಗರಿಕರಾಗಿ ಸಂವಿಧಾನವನ್ನು ನಾವೂ ಎತ್ತಿ ಹಿಡಿಯುತ್ತೇವೆ. ಆದರೆ ಶಂಕರಾಚಾರ್ಯರ ವಿಷಯದಲ್ಲಿ ಅವರ ಸ್ಥಾನಮಾನಗಳನ್ನು ಪರಿಗಣಿಸಬೇಕಿತ್ತು . ದೀರ್ಘಕಾಲದ ಅಪರಾಧದ ಹಿನ್ನೆಲೆ ಹೊಂದಿದ್ದಾಗ ಮಾತ್ರ ಕಂಚಿಶ್ರೀಗಳು ಈ ರೀತಿಯ ನಡವಳಿಕೆಗೆ ಅರ್ಹರಾಗುತ್ತಿದ್ದರು ಎಂದು ರಾಜ್ಯದ ಪ್ರಮುಖ ಲಿಂಗಾಯತ ಮಠಗಳಲ್ಲೊಂದಾದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಆಚಾರ್ಯರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾಚಾರ್ಯ ಸ್ವಾಮೀಜಿ- ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ . ಕಂಚಿಶ್ರೀಗಳು ಪ್ರಮುಖ ಆರೋಪಿಯಾಗಿರುವ ಕೊಲೆ ಪ್ರಕರಣವನ್ನು ನ್ಯಾಯಾಲಯವೇ ಬಗೆಹರಿಸಲಿದೆ ಎಂದರು.
ಕಂಚಿಶ್ರೀ ಪ್ರಕರಣದಲ್ಲಿ ಕಾನೂನು ತನ್ನ ಪ್ರಭುತ್ವವನ್ನು ಮೆರೆದಿದೆ. ಆದರೆ ಪ್ರಕರಣವನ್ನು ನಿರ್ವಹಿಸಿದ ಕುರಿತು ನಮಗೆ ನೋವುಂಟಾಗಿದೆ. ಇನ್ನಷ್ಟು ಉತ್ತಮ ರೀತಿಯಲ್ಲಿ ಪ್ರಕರಣವನ್ನು ನಿರ್ವಹಿಸಬಹುದಿತ್ತು ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಹೇಳಿದರು.
ಶಂಕರಾಚಾರ್ಯರು ಓರ್ವ ಆರೋಪಿ ಮಾತ್ರ : ಕಂಚಿಶ್ರೀಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕಿತ್ತು . ಅವರು ಕೊಲೆ ಪ್ರಕರಣದಲ್ಲೊಬ್ಬ ಆರೋಪಿ ಮಾತ್ರ. ಅವರ ಸ್ಥಾನಮಾನ ಹಾಗೂ ಹಿಂದೂ ಸಮಾಜದ ಪ್ರಮುಖ ಪೀಠದ ಹಿನ್ನೆಲೆಯನ್ನು ನೋಡಿ ಪ್ರಕರಣವನ್ನು ಗೌರವಯುತವಾಗಿ ನಿರ್ವಹಿಸಬೇಕಿತ್ತು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಂಕರಾಚಾರ್ಯರ ವಿಷಯವನ್ನು ನ್ಯಾಯಾಲಯವೇ ತೀರ್ಮಾನಿಸುತ್ತದೆ. ಆದರೆ ಅವರ ಜಾಮೀನಿಗೆ ಯಾರೂ ವಿರೋಧ ತೋರಿಸಬಾರದು. ಪ್ರಕರಣವನ್ನು ರಾಜಕೀಯವಾಗಿಸುವುದು ಸಲ್ಲ ಎಂದು ಪೇಜಾವರ ಶ್ರೀ ಹೇಳಿದರು.
ಕಂಚಿಮಠಕ್ಕೆ ಉಂಟಾಗಿರುವ ಆಘಾತದಲ್ಲಿ ನಾವೆಲ್ಲರೂ ಭಾಗಿಯಾದ್ದೇವೆ. ಈ ರೀತಿ ಬೇರೆ ಯಾರೊಬ್ಬರಿಗೂ ಆಗಬಾರದು. ಕಂಚಿಶ್ರೀಗಳ ಸ್ಥಾನಕ್ಕೆ ಗೌರವ ಕೊಡಬೇಕು ಎಂದು ಒಕ್ಕಲಿಗರ ಶಕ್ತಿಸ್ಥಾನ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.
ನಷ್ಟ ತುಂಬುವವರು ಯಾರು ?
ಇಂದಲ್ಲಾ ನಾಳೆ ಕಂಚಿಶ್ರೀಗಳು ಅಮಾಯಕರೆಂದು ನ್ಯಾಯಾಲಯ ತೀರ್ಮಾನಿಸಿದರೆ ಈಗಾಗಲೇ ಉಂಟಾಗಿರುವ ನಷ್ಟವನ್ನು ತುಂಬುವವರು ಯಾರು? ನಮ್ಮ ಪ್ರಕಾರ ಕಂಚಿಶ್ರೀಗಳು ಅಪರಾಧಿಯೂ ಅಲ್ಲ , ಅಮಾಯಕರೂ ಅಲ್ಲ , ಅವರೊಬ್ಬ ಆರೋಪಿ ಮಾತ್ರ ಎಂದು ತರಳಬಾಳು ಶ್ರೀ ಹೇಳಿದರು. ಆದರೆ ತಾವು ಕಂಚಿ ಶಂಕರಾಚಾರ್ಯರ ಬಂಧನಕ್ಕೆ ವಿರೋಧವಾಗಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಶಂಕರಾಚಾರ್ಯರವನ್ನು ಗೃಹಬಂಧನದಲ್ಲಿಟ್ಟು ತನಿಖೆಯನ್ನು ಮುಂದುವರಿಸಬೇಕು. ತನಿಖೆ ಎಷ್ಟು ಕಾಲ ನಡೆಯುತ್ತದೋ ಅಷ್ಟು ಕಾಲ ಶ್ರೀಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ತರಳಬಾಳು ಶ್ರೀ ಒತ್ತಾಯಿಸಿದರು.
ಕಂಚಿಶ್ರೀಗಳ ಬಂಧನದ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಂಧನದ ಹಿಂದೆ ಪೂರ್ವಾಗ್ರಹಗಳು ಇದ್ದಂತೆ ಕಾಣಿಸುತ್ತಿದೆ ಎಂದು ಸುತ್ತೂರು ಬೃಹನ್ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕೂಡ್ಲಿಗಿ ಶೃಂಗೇರಿ ಮಠದ ಜಗದ್ಗುರು, ಹೈದರಾಬಾದ್ನ ಪುಷ್ಪಗಿರಿ ಸ್ವಾಮೀಜಿ, ಓಂಕಾರ್ ಹಿಲ್ಸ್ನ ಶಿವಪುರಿ ಸ್ವಾಮೀಜಿ, ಹೃಷಿಕೇಶದ ದಯಾನಂದ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರರ ಪ್ರತಿನಿಧಿಗಳು ಹಾಗೂ ಅವನಿ ಶೃಂಗೇರಿ ಮಠದ ಅಭಿನವ ವಿದ್ಯಾಶಂಕರ ಸ್ವಾಮೀಜಿ ಸಭೆಯಲ್ಲಿ ಹಾಜರಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು