ನಾಗತಿಹಳ್ಳಿ ‘ಅಭಿವ್ಯಕ್ತಿ’ಯ ಆ.15ರ ಕಾರ್ಯಕ್ರಮಕ್ಕೆ ತ್ರಿವರ್ಣ ರಂಗು
ನಾಗತಿಹಳ್ಳಿ ‘ಅಭಿವ್ಯಕ್ತಿ’ಯ ಆ.15ರ ಕಾರ್ಯಕ್ರಮಕ್ಕೆ ತ್ರಿವರ್ಣ ರಂಗು
ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದ ‘ಅಭಿವ್ಯಕ್ತಿ’ ಸಾಂಸ್ಕೃತಿಕ ವೇದಿಕೆ ಆಗಸ್ಟ್ 15ರ ಮತ್ತೊಂದು ಸಂಭ್ರಮಕ್ಕೆ ಸಜ್ಜಾಗಿದೆ. ವಿವರಗಳು ಇಲ್ಲಿವೆ.
ಪ್ರತಿ ಆಗಸ್ಟ್ 15ರಂದು ಪುಸ್ತಕ ಪ್ರಕಟಿಸುವ ತನ್ನ ಸಂಪ್ರದಾಯವನ್ನು ‘ಅಭಿವ್ಯಕ್ತಿ’ ಮುಂದುವರಿಸಿದ್ದು , ‘ಇಗೋ ಪಂಜರ ಅಗೋ ಮುಗಿಲು’, ‘ದೀಪವೂ ನಿನ್ನದೆ ಗಾಳಿಯೂ ನಿನ್ನದೆ’ ಹಾಗೂ ‘ನನ್ನ ಪ್ರೀತಿಯ ಹುಡುಗಿಗೆ’ ಕೃತಿಗಳು ಬಿಡುಗಡೆಯಾಗಲಿವೆ.
‘ಇಗೋ ಪಂಜರ ಅಗೋ ಮುಗಿಲು’ ಕೃತಿ ನಾಗತಿಹಳ್ಳಿ ಚಂದ್ರಶೇಖರರ ‘ವಲಸೆ ಹಕ್ಕಿಯ ಹಾಡು’ ಕಾದಂಬರಿಯ ನಾಟಕ ರೂಪ. ಎಲ್.ಎನ್.ಮುಕುಂದರಾಜ್ ಕಾದಂಬರಿಯನ್ನು ನಾಟಕವನ್ನಾಗಿ ಪರಿವರ್ತಿಸಿದ್ದಾರೆ. ಇನ್ನು , ‘ನನ್ನ ಪ್ರೀತಿಯ ಹುಡುಗಿಗೆ’ ನಾಗತಿಹಳ್ಳಿ ಅಂಕಣಬರಹದ ಮೂರನೆಯ ಸಂಪುಟ.
‘ದೀಪವೂ ನಿನ್ನದೆ ಗಾಳಿಯೂ ನಿನ್ನದೆ’ ಶಶಿಕಲಾ ಚಂದ್ರಶೇಖರರ ಕಥಾ ಸಂಕಲನ. ಅಮೆರಿಕನ್ನಡತಿ ಶಶಿಕಲಾ ಆರ್ದ್ರ ಬರಹಗಳಿಗೆ ಹೆಸರಾದ ಕಥೆಗಾರ್ತಿ, ಕವಯತ್ರಿ. ಅವರ ಕಥೆಗಳನ್ನು ಪುಸ್ತಕ ರೂಪದಲ್ಲಿ ಓದುವ ಅವಕಾಶವನ್ನು ಅಭಿವ್ಯಕ್ತಿ ಕಲ್ಪಿಸುತ್ತಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಭೂಷಣ ಡಾ.ಹೆಚ್.ನರಸಿಂಹಯ್ಯ ವಹಿಸುವರು. ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೃತಿ ಬಿಡುಗಡೆ ಮಾಡುವರು. ಡಾ.ನಾ. ದಾಮೋದರ ಶೆಟ್ಟಿ , ಜಯಂತ ಕಾಯ್ಕಿಣಿ ಹಾಗೂ ಪ್ರೊ.ಎಂ.ಕೃಷ್ಣೇಗೌಡ ಪುಸ್ತಕಗಳ ಕುರಿತು ಮಾತನಾಡುವರು.
ಅಭಿವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಜಯನಗರ 8ನೇ ಬ್ಲಾಕ್ನಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಯಲಿದೆ. ಆ.15, ಭಾನುವಾರ ಸಂಜೆ 4ಕ್ಕೆ ಕಾರ್ಯಕ್ರಮ ಶುರು.
ಸಂಜೆ 7ಕ್ಕೆ ‘ಇಗೋ ಪಂಜರ ಅಗೋ ಮುಗಿಲು’ ನಾಟಕ ಪ್ರದರ್ಶನ ನಡೆಯಲಿದೆ. ನಿರ್ದೇಶಕ ಪ್ರೊ. ಸಿ.ಜಿ.ಕೆ. ಅವರದು. ರಂಗ ನಿರಂತರ ತಂಡ ನಾಟಕವನ್ನು ಅಭಿನಯಿಸಲಿದೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಹದಿನೆಂಟರ ಹಿಗ್ಗು -ಸಿನಿಮಾ- ಸಾಹಿತ್ಯ ಹಾಗೂ ‘ಅಭಿವ್ಯಕ್ತಿ’ ಹದಿನೆಂಟರ ಪರ್ವ !
ಮುಖಪುಟ / ವಾರ್ತೆಗಳು












Click it and Unblock the Notifications