ಮತ್ತೆ ಚುರುಕಾಯ್ತು ಮುಂಗಾರು ; ಕೊಚ್ಚಿಹೋದ ಜೀವಗಳು ಮೂರು
ಮತ್ತೆ ಚುರುಕಾಯ್ತು ಮುಂಗಾರು ; ಕೊಚ್ಚಿಹೋದ ಜೀವಗಳು ಮೂರು
ಮಲೆನಾಡು, ಕರಾವಳಿ, ಬಯಲುಸೀಮೆಯಲ್ಲಿ ಮಳೆ ಮಳೆ ಮಳೆ
ಬೆಳಗಾವಿಯ ಖಾನಾಪುರ ತಾಲ್ಲೂಕಿನ ಕುಂಬಾರಹಳ್ಳದಲ್ಲಿ ಭಾರೀ ಮಳೆಯಿಂದ ಉಂಟಾದ ನೀರಿನ ಸೆಳೆತಕ್ಕೆ ಮೂವರು ಕೊಚ್ಚಿ ಹೋಗಿದ್ದಾರೆ. ನೀರು ಪಾಲಾದವರಲ್ಲಿ ಒಬ್ಬಾಕೆ ಶಾಲಾ ಬಾಲಕಿ. ದೇವಸ್ಥಾನಕ್ಕೆ ಮಾರುತಿ ಕಾರಿನಲ್ಲಿ ಹೊರಟಿದ್ದ ಇಬ್ಬರು ಕಾರು ಸಮೇತ ಕೊಚ್ಚಿಹೋಗಿದ್ದರೆ, ಬಾಲಕಿ ಗೆಳತಿಯರೊಂದಿಗೆ ಹಳ್ಳ ದಾಟಲು ಪ್ರಯತ್ನಿಸುತ್ತಿದ್ದಾಗ ನೀರು ಪಾಲಾದಳು ಎಂದು ಬೆಳಗಾವಿ ವರದಿಗಳು ತಿಳಿಸಿವೆ.
ಮಲೆನಾಡು, ಕರಾವಳಿ ಮಾತ್ರವಲ್ಲದೆ ಬಯಲು ಸೀಮೆಯ ವಿವಿಧೆಡೆಗಳಲ್ಲೂ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಕೊಡಗು ಜಿಲ್ಲೆ , ಪುತ್ತೂರು ಹಾಗೂ ಸುಳ್ಯದಲ್ಲಿ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಆಗುಂಬೆಯಲ್ಲಿ ದಾಖಲೆ ಮಳೆ : ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಗುಲ್ಬರ್ಗ, ಶಿವಮೊಗ್ಗ , ಉತ್ತರಕನ್ನಡ, ದಾವಣಗೆರೆ, ರಾಯಚೂರು ಹಾಗೂ ಮೈಸೂರು ಉತ್ತಮ ಮಳೆ ಬಿದ್ದಿರುವ ಜಿಲ್ಲೆಗಳು. ಆಗುಂಬೆಯಲ್ಲಿ 19.24 ಸೆಂಮೀ ದಾಖಲೆ ಮಳೆ ಸುರಿದಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಆಗುಂಬೆಯಲ್ಲಿ ಸುರಿದ ದಾಖಲೆ ಮಳೆ. ಸುಬ್ರಹ್ಮಣ್ಯನ ಕುಕ್ಕೆಯನ್ನು ಸಂಪರ್ಕಿಸುವ ಉಪ್ಪಿನಂಗಡಿ-ಸುಬ್ರಹ್ಮಣ್ಯ, ಗುಂಡ್ಯ-ಸುಬ್ರಹ್ಮಣ್ಯ ಹಾಗೂ ಪುತ್ತೂರು-ಸುಬ್ರಹ್ಮಣ್ಯ ಸೇತುವೆಗಳು ಜಲಾವೃತಗೊಂಡಿದ್ದು , ಸಂಚಾರ ಸ್ಥಗಿತಗೊಂಡಿದೆ.
ತೀರ್ಥಹಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು , ತುಂಗಾ ಜಲಾನಯನ ಪ್ರದೇಶದಲ್ಲಿ ನೀರ ಚಿತ್ರಗಳು ತಂಪೆನಿಸುತ್ತಿವೆ. ಇದೇ ಕಾಲಕ್ಕೆ ಗಾಜನೂರು ಜಲಾಶಯದ ಒಳಹರಿವು ಹೆಚ್ಚಿದೆ. ಕೊಡಗು, ಮಡಿಕೇರಿಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು- ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಮೈದುಂಬಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications