ಬೆಂಗಳೂರಿನಲ್ಲಿ ‘ಮಾಯದಂಥ ಮಳೆ’ ಬಂತಣ್ಣ ! ಆರು ಮಂದಿ ನಾಪತ್ತೆ
ಬೆಂಗಳೂರಿನಲ್ಲಿ ‘ಮಾಯದಂಥ ಮಳೆ’ ಬಂತಣ್ಣ ! ಆರು ಮಂದಿ ನಾಪತ್ತೆ
ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಳೆ
ಮೇ 31, ಸೋಮವಾರ ಸಂಜೆಯ ಅಫಿಷಿಯಲ್ ಮಳೆ ಬೆಂಗಳೂರೆಂಬ ಬೆಂಗಳೂರು ನಗರವನ್ನೇ ನಡುಗಿಸುವಂತಿತ್ತು. ಗುಡುಗು ಸಿಡಿಲಿನಾರ್ಭಟದೊಂದಿಗೆ ಸುರಿದ ಭಾರೀ ಮಳೆಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದು ,ನೂರಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು, ತುಂಬಿ ಹರಿಯುತ್ತಿದ್ದ ಚರಂಡಿ ನೀರಿನ ಸೆಳೆತಕ್ಕೆ ಸಿಕ್ಕು, ಕೊಚ್ಚಿಕೊಂಡು ಹೋಗಿದ್ದಾರೆ. ಜೀವನಭೀಮಾನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರು ಚರಂಡಿ ನೀರಿನ ಪಾಲಾಗಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಈ ತೆರನಾದ ಭಾರೀ ಪ್ರಮಾಣದ ಮಳೆ ಕಂಡು ಬಂದಿದ್ದು ಇದೇ ಮೊದಲು. ರಾತ್ರಿಯ ವೇಳೆಗೆ ಧಾರಾಕಾರವಾಗಿ ಸುರಿದ ಮಳೆಯಿಂದ ನಗರದ ತಗ್ಗು ಪ್ರದೇಶಗಳ ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು. ಸರಾಸರಿ 50ಮಿ.ಮೀ. ಮಳೆಯಾಗಿದ್ದು ಜನಜೀವನ ಎಲ್ಲೆಡೆ ಅಸ್ತವ್ಯಸ್ತವಾಗಿರುವುದು ಕಂಡು ಬಂದಿದೆ. ಮರಗಳು, ಬೀದಿ ದೀಪದ ಕಂಬಗಳು ಉರುಳಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.
ಮಾಗಡಿ ರಸ್ತೆ , ಗಾಂಧಿ ನಗರ, ಹೆಬ್ಬಾಳ, ಪದ್ಮನಾಭನಗರ, ಹನುಮಂತನಗರ, ಶ್ರೀನಗರ, ಇಂದಿರಾನಗರ, ಮಡಿವಾಳ, ಕೋರಮಂಗಲ, ಶಿವಾಜಿನಗರ, ಮತ್ತಿಕೆರೆ, ಚಾಮರಾಜಪೇಟೆ ಮುಂತಾದ ಅನೇಕ ತಗ್ಗು ಪ್ರದೇಶಗಳ ಮನೆಗಳಲ್ಲೆಲ್ಲ ನೀರು ನುಗ್ಗಿದೆ. ಕೃಷ್ಣರಾಜ ಮಾರುಕಟ್ಟೆ ಸಂಕೀರ್ಣಕ್ಕೂ ನೀರು ನುಗ್ಗಿದೆ. ನಗರದ ಬಹುತೇಕರು ವರುಣನ ಅವಕೃಪೆಗೆ ಈಡಾಗಿರುವುದು ಕಂಡುಬಂದಿದೆ.
ಮಳೆಯ ಮುಸುಕು ಮಂಗಳವಾರವೂ ಮುಂದುವರಿದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications