ಕೂಡಿ ಬರದ ಕಂಕಣ ; ಸೋನಿಯಾ ಕಟಾಕ್ಷಕ್ಕೆಕಾಯುತ್ತಿರುವ ಗೌಡರು
ಕೂಡಿ
ಬರದ
ಕಂಕಣ
;
ಸೋನಿಯಾ
ಕಟಾಕ್ಷಕ್ಕೆಕಾಯುತ್ತಿರುವ
ಗೌಡರು
ಮಂಕಾದ
ಸಿದ್ಧರಾಮಯ್ಯ,
ಜಾಕ್ಪಾಟ್
ನಿರೀಕ್ಷೆಯಲ್ಲಿ
ಧರ್ಮಸಿಂಗ್
- ರಾಜು ಮಹತಿ
ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದು , ಈ ಪಟ್ಟನ್ನು ಸಡಿಲಿಸದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಮೆತ್ತಗಾಗಿರುವ ಜಾತ್ಯತೀತ ಜನತಾದಳ ಮುಖ್ಯಮಂತ್ರಿ ಸ್ಥಾನ ತನಗೇ ಸಿಗಬೇಕೆನ್ನುವ ಪಟ್ಟು ಸಡಿಲಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕ ಧರ್ಮಸಿಂಗ್ ಪರ ಲಾಬಿ ಚುರುಕಾಗಿದೆ. ಬೆಂಗಳೂರು ಹಾಗೂ ದೆಹಲಿಯಲ್ಲಿ ಧರ್ಮಸಿಂಗ್ ಬೆಂಬಲಿಗರು ತಮ್ಮ ನಾಯಕನಿಗೆ ಕುರ್ಚಿ ದೊರಕಿಸಿಕೊಡಲು ಕ್ರಿಯಾಶೀಲರಾಗಿದ್ದಾರೆ. ಮುಖ್ಯಮಂತ್ರಿ ರೇಸಿನಲ್ಲಿ ಕಾಂಗ್ರೆಸ್ನ ಇತರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್.ಕೆ.ಪಾಟೀಲ್ ಹಿಂದುಳಿದಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಕುರ್ಚಿ ಪೈಪೋಟಿಯಲ್ಲಿ ಅತ್ಯಂತ ನಿರಾಶೆ ಹೊಂದಿರುವ ವ್ಯಕ್ತಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷದಿಂದ ಬಿಂಬಿಸಲಾಗಿದ್ದರೂ, ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವ ದೇವೇಗೌಡರ ಉತ್ಸಾಹ ದಿನೇದಿನೇ ತಣ್ಣಗಾಗುತ್ತಿದೆ ಎನ್ನಲಾಗಿದೆ. ಧರ್ಮಸಿಂಗ್ ಕುರಿತು ದೇವೇಗೌಡರು ಮೆದುನೀತಿ ತಳೆದಿರುವುದು ಈಚಿನ ವಿದ್ಯಮಾನ.
ಈ ನಡುವೆ ನೆನೆಗುದಿಗೆ ಬಿದ್ದಿರುವ ರಾಜ್ಯದ ನೂತನ ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಸೋನಿಯಾಗಾಂಧಿ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ನವದೆಹಲಿಯಲ್ಲಿ ಬೀಡುಬಿಟ್ಟಿರುವ ದೇವೇಗೌಡರು ಹಾಗೂ ಅವರ ಬಳಗ ಸೋನಿಯಾ ಸಂದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ರಚನೆಯ ಕಸರತ್ತಿನಲ್ಲಿ ತೊಡಗಿರುವ ಸೋನಿಯಾ ಮೇಡಂಗೆ ದೇವೇಗೌಡರನ್ನು ನೋಡಲು ಇನ್ನೂ ಬಿಡುವು ದೊರೆತಿಲ್ಲ .
ಮೇ 21ರ ಶುಕ್ರವಾರ, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆಯುವ ರಾಜೀವ್ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಸೋನಿಯಾ ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಗೌಡ-ಸೋನಿಯಾ ಭೇಟಿ ಯಾವಾಗ ನಡೆಯುತ್ತದೆ ಎನ್ನುವ ಅಂದಾಜು ಯಾರಿಗೂ ಇಲ್ಲ .
ಸೋನಿಯಾ ಹೊರತಾದ ಇತರ ಕಾಂಗ್ರೆಸ್ ನಾಯಕರೊಡನೆ ಮಾತುಕತೆಗೆ ದೇವೇಗೌಡರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಅಂದಹಾಗೆ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಾವುದೇ ಸರ್ಕಾರವಿಲ್ಲದೆ ಅತಂತ್ರ ಪರಿಸ್ಥಿತಿ ಉಂಟಾದ ದಾಖಲೆಯ ಅವಧಿಯಿದು. ದೇವೇಗೌಡರಿಗೆ ಹಾಗೂ ಸೋನಿಯಾಗಾಂಧಿಗೆ ಜಯವಾಗಲಿ !
ಮುಖಪುಟ / ಕುರುಕ್ಷೇತ್ರ-2004