ಚಂದ್ರಬಾಬು ಸಾಮ್ರಾಜ್ಯ ಪತನ ;ಧೂಳಿನಿಂದ ಎದ್ದುಬಂದ ಕಾಂಗ್ರೆಸ್
ಚಂದ್ರಬಾಬು ಸಾಮ್ರಾಜ್ಯ ಪತನ ;ಧೂಳಿನಿಂದ ಎದ್ದುಬಂದ ಕಾಂಗ್ರೆಸ್
ವೈ.ಎಸ್.ರಾಜಶೇಖರ ರೆಡ್ಡಿ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ?
ಆಂಧ್ರ ವಿಧಾನಸಭೆಯ 294 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಇನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ವಿಜಯ ಸಾಧಿಸಿದೆ. ಚಂದ್ರಬಾಬು ನೇತೃತ್ವದ ತೆಲುಗುದೇಶಂ ಹಾಗೂ ಮಿತ್ರಪಕ್ಷಗಳು ನಲವತ್ತೊಂಬತ್ತು ಚಿಲ್ಲರೆ ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಗಿದ್ದು ಹೀನಾಯ ಹಿನ್ನಡೆ ಅನುಭವಿಸಿವೆ. ಇದರೊಂದಿಗೆ ಒಂದು ದಶಕ ಕಾಲದ ತೆಲುಗುದೇಶಂ ಚಕ್ರಾಧಿಪತ್ಯ ಕೊನೆಗೊಂಡಂತಾಗಿದೆ.
ಜನತೆಯ ತೀರ್ಪನ್ನು ಗೌರವಿಸುವುದಾಗಿ ಹೇಳಿರುವ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಸುರ್ಜಿತ್ಸಿಂಗ್ ಬರ್ನಾಲ ಅವರಿಗೆ ನಾಯ್ಡು ರಾಜೀನಾಮೆ ಪತ್ರ ಸಲ್ಲಿಸಿದರು. ಜನರು ಬದಲಾವಣೆಯ ಪರವಾಗಿ ವೋಟು ಚಲಾಯಿಸಿದ್ದಾರೆ. ಸೋಲನ್ನು ಒಪ್ಪಿಕೊಂಡಿದ್ದೇನೆ. ಕ್ರಿಯಾತ್ಮಕ ಪ್ರತಿಪಕ್ಷವಾಗಿ ತೆಲುಗುದೇಶಂ ಕಾರ್ಯ ನಿರ್ವಹಿಸುಲಿದೆ ಎಂದು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಟಿಆರ್ಎಸ್ ಪಕ್ಷ ತೆಲಂಗಾಣ ಪ್ರಾಂತ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿರುವುದು ಚುನಾವಣೆಯ ಮತ್ತೊಂದು ವಿಶೇಷ .
ಪಕ್ಷ ಹೀನಾಯವಾಗಿ ಸೋತಿದ್ದರೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೊಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ. ಅವರು 59,588 ಮತಗಳ ಅಂತರದಿಂದ ಗೆದ್ದಿದ್ದಾರೆ.
ವೈಎಸ್ಆರ್ ಮುಖ್ಯಮಂತ್ರಿ : ಒಂದೆಡೆ ಕಾಂಗ್ರೆಸ್ ಪ್ರಚಂಡ ಜಯಭೇರಿ ಬಾರಿಸುವುದರೊಂದಿಗೆ ತೆಲುಗುದೇಶಂ ಸರ್ಕಾರ ನಿರ್ಗಮಿಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಜೋರಾಗಿವೆ. ಹಿರಿಯ ನಾಯಕ ವೈ.ಆರ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗುವುದು ಹೆಚ್ಚೂ ಕಡಿಮೆ ಖಚಿತವಾಗಿದೆ. ರಾಜಶೇಖರ ರೆಡ್ಡಿ ಪ್ರಸಕ್ತ ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸಿದ್ದರು.
ಪುಲಿವೆಂದಲ ವಿಧಾನಸಭಾ ಕ್ಷೇತ್ರದಿಂದ ರಾಜಶೇಖರ ರೆಡ್ಡಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸಮೀಪದ ಸ್ಪರ್ಧಿ ತೆಲುಗುದೇಶಂನ ಸತೀಶ್ಕುಮಾರ್ ರೆಡ್ಡಿಯನ್ನು 40,777 ಮತಗಳಿಂದ ಸೋಲಿಸಿದ್ದಾರೆ.
ಪಕ್ಷಗಳ ಬಲಾಬಲ ಇಂತಿದೆ :
ಒಟ್ಟು ಸ್ಥಾನಗಳು -294
ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು - 226
ತೆಲುಗುದೇಶಂ ಹಾಗೂ ಮಿತ್ರಪಕ್ಷಗಳು-49
ಇತರರು - 19
ಆಂಧ್ರಪ್ರದೇಶದಲ್ಲಿ ಸರ್ಕಾರ ರಚನೆಗೆ 154 ಸ್ಥಾನಗಳು ಸಾಕು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications