ಎಲ್ರೂಸೇರ್ಕೊಂಡು ನಾಮ ಹಾಕ್ಬಿಡ್ತಾರೆ ಸಾರ್ ಎಂದ್ರು ಸಿದ್ರಾಮಯ್ಯ
ಎಲ್ರೂಸೇರ್ಕೊಂಡು ನಾಮ ಹಾಕ್ಬಿಡ್ತಾರೆ ಸಾರ್ ಎಂದ್ರು ಸಿದ್ರಾಮಯ್ಯ
ಚುನಾವಣಾ ಸಮೀಕ್ಷೆಗಳನ್ನು ರದ್ದು ಪಡಿಸಲು ಜಾತ್ಯತೀತ ದಳ ಆಗ್ರಹ
ಸಮೀಕ್ಷೆಗಳು ನಿರ್ದಿಷ್ಠ ಪಕ್ಷದ ಪರವಾಗಿದ್ದಂತಿದೆ. ಇಂತಹ ಸಮೀಕ್ಷೆಗಳು ನಮ್ಮಂತಹ ಪ್ರಗತಿಪರ ಪಕ್ಷಗಳಿಗೆ ಮಾರಕವಾಗಿ ಪರಿಣಮಿಸುತ್ತವೆ. ಆದ್ದರಿಂದ ಅವುಗಳನ್ನು ನಿಷೇಧಿಸಬೇಕಾಗಿದೆ ಎಂದು ಸಿದ್ಧರಾಮಯ್ಯ ಏ.28ರಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುದ್ದಿಗೋಷ್ಠಿಯುದ್ದಕ್ಕೂ ಸಮೀಕ್ಷೆಗಳನ್ನು ಟೀಕಿಸಿ, ವ್ಯಂಗ್ಯವಾಡಿದ ಸಿದ್ಧರಾಮಯ್ಯ, ಸಮೀಕ್ಷೆಗಳಿಗೆ ಸವಾಲು ಹಾಕಿದರು. ಸದ್ಯ, ಹಳ್ಳಿಜನ ಟೀವಿ ನೋಡೊಲ್ಲ , ಪೇಪರ್ ಓದಲ್ಲ. ನಾವು ಬಚಾವ್ ಆಗಿದ್ದೀವಿ. ಇಲ್ಲದಿದ್ದಲ್ಲಿ ಎಲ್ಲ ಸೇರ್ಕೊಂಡ್ ನಮಗೆ ನಾಮ ಹಾಕಿ ಬಿಡೋರ್ ಎಂದು ಮೂದಲಿಸಿದರು.
ಒಂದು ಪತ್ರಿಕೆಯಂತೂ ನಮಗೆ ಸೊನ್ನೆ ಸ್ಥಾನ ಬರುವುದೆಂದು ಹೇಳಿದ್ದಾರೆ. ಸೊನ್ನೆ ಸ್ಥಾನ ಬಂದರೆ ನಾನು ರಾಜಕೀಯ ಬಿಡುತ್ತೇನೆ. ಹೆಚ್ಚು ಬಂದರೆ ಅವರು ವೃತ್ತಿ ಬಿಡುತ್ತಾರಾ? ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ಸಮೀಕ್ಷೆಯ ಪ್ರಕಾರ ಜಾತ್ಯತೀತ ಜನತಾದಕ್ಕೆ 113 ಸ್ಥಾನಗಳು ಬರುತ್ತವೆ. ನಾವು ಸರಳ ಬಹುಮತ ಪಡೆದು ಅಧಿಕಾರ ನಡೆಸುತ್ತೇವೆ. ನಂತರದ ಸ್ಥಾನ ಕಾಂಗ್ರೆಸ್ ಪಡೆದರೆ, ಬಿಜೆಪಿ ಮೂರನೇ ಸ್ಥಾನದಲ್ಲೇ ತೃಪ್ತಿ ಪಡಲಿದೆ ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಮಾಡುವುದರಲ್ಲಿ ಕಾಂಗ್ರೆಸಿಗರು ಪ್ರವೀಣರು. ಅಂದು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ , ಇಂದು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಕೈಚಳಕ ತೋರಿದ್ದಾರೆ ಎಂದು ಆರೋಪಿಸಿದರು.
ನಕಲಿ ಮತದಾನ ಮಾಡಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥಿಸಿದ ಎಸ್ಸೆಂ ಕೃಷ್ಣ ಬಹಳಷ್ಟು ಅಪಾಯಕಾರಿ. ರಾಜ್ಯದಲ್ಲಿ ನಡೆದ ಚುನಾವಣಾ ಹಿಂಸಾಚಾರ ಮತ್ತು ಅಕ್ರಮಗಳ ಕುರಿತು ಕೂಡಲೇ ತನಿಖೆ ನಡೆಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications