ಮತ್ತೆ ಬುಸುಗುಟ್ಟುತ್ತಿದ್ದಾನೆ ವೀರಪ್ಪನ್-ಜ್ಯೋತಿಪ್ರಕಾಶ್ ಮಿರ್ಜಿ
ಮತ್ತೆ ಬುಸುಗುಟ್ಟುತ್ತಿದ್ದಾನೆ ವೀರಪ್ಪನ್-ಜ್ಯೋತಿಪ್ರಕಾಶ್ ಮಿರ್ಜಿ
ಅಬ್ದುಲ್ ಕರೀಂ ಫರ್ಮಾನಿಗೆ ಓಗೊಟ್ಟ ಸುಪ್ರಿಂಕೋರ್ಟ್
- ವೀರಪ್ಪನ್ ಮತ್ತೆ ಹೆಡೆ ಎತ್ತಿದ್ದಾನೆ. ಕರ್ನಾಟಕ- ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಗಣ್ಯರೊಬ್ಬರನ್ನು ಅಪಹರಿಸಲು ಅವನು ಹೊಂಚು ಹಾಕುತ್ತಿದ್ದಾನೆ. ಆ ಗಣ್ಯ ವ್ಯಕ್ತಿ ಯಾರು ಅಂತ ಹೇಳಲಾಗದು.
- ಚಾಮರಾಜನಗರ ಜಿಲ್ಲೆಗೆ ಕಾಲಿಡುವ ಯಾರೇ ಗಣ್ಯ ವ್ಯಕ್ತಿಗಳಾಗಲಿ ಆಗಲಿ, ಪೊಲೀಸರಿಗೆ ಹೇಳದೆ ಬರಕೂಡದು.
- ನಾಗಪ್ಪ ಹತ್ಯೆ ನಂತರ ಚಾಮರಾಜನಗರ ಜಿಲ್ಲೆಯ ಬುಡಕಟ್ಟಿನ ಜನ ವೀರಪ್ಪನ್ ಪತ್ತೆಗೆ ಸಹಾಯ ಮಾಡುತ್ತಿದ್ದಾರೆ.
- ಗೋಪಿನಾಥಂ, ಪಾಲಾರ್, ಬಡಕಳ್ಳಿ, ಮೋಟಳ್ಳಿ ಮೊದಲಾದ ಕಡೆ ಆರೋಗ್ಯ ಶಿಬಿರಗಳನ್ನು ನಡೆಸಿ, ಜನರಲ್ಲಿ ಎಸ್ಟಿಎಫ್ ಬಗ್ಗೆ ಇರುವ ತಪ್ಪು ಭಾವನೆಯನ್ನು ಹೋಗಲಾಡಿಸುತ್ತಿದ್ದೇವೆ.
- ವೀರಪ್ಪನ್ ತಂಡದ ಸಂಖ್ಯೆ ತೀರಾ ಕುಸಿದಿದೆ. ಅವನು ಈಗ ನೆಲೆಯಿಲ್ಲದೆ ಅಲೆಯುತ್ತಿದ್ದಾನೆ. ಆದಷ್ಟು ಬೇಗ ಅವನನ್ನು ಹಿಡಿಯುತ್ತೇವೆ.
- ಎಸ್ಟಿಎಫ್ ಪಡೆಯಲ್ಲಿ ಸಿಬ್ಬಂದಿ ಸಂಖ್ಯೆಗೆ ಕೊರತೆಯಿಲ್ಲ. ಕೇಂದ್ರ ಸರ್ಕಾರ ಕೂಡ ಕಾರ್ಯಾಚರಣೆಗೆ ಚೆನ್ನಾಗಿ ಸ್ಪಂದಿಸುತ್ತಿದೆ. ಉಪಗ್ರಹ ಬಳಕೆಯ ದೂರವಾಣಿಗಳು, ಅತ್ಯಾಧುನಿಕ ತಂತ್ರಜ್ಞಾನದ ಆರು ಸಲಕರಣೆಗಳು ನಮ್ಮ ಕೈಸೇರಿವೆ. ಸಾಲದ್ದಕ್ಕೆ 30 ಪೊಲೀಸರಿಗೆ ವಿಶೇಷ ಕಮಾಂಡೋ ತರಪೇತಿ ಕೊಟ್ಟಿದ್ದೇವೆ.
ಈಗ ಜ್ಯೋತಿಪ್ರಕಾಶ್ ಮಿರ್ಜಿ ಮಾತಾಡುತ್ತಿದ್ದಾರೆ. ಅವರಿಗೆ ವೀರಪ್ಪನ್ ಅಪಹರಣ ನಡೆಸುವ ಸಂಚು ಗೊತ್ತಾಗುತ್ತದೆ. ವೀರಪ್ಪನ್ ಚಾಮರಾಜನಗರ ಜಿಲ್ಲೆಯಲ್ಲಿರುವುದೂ ಗೊತ್ತಾಗುತ್ತದೆ. ಅವನ ತಂಡದ ಸಂಖ್ಯಾ ಬಲ ಕಡಿಮೆಯಾಗಿರುವುದು ಗೊತ್ತಾಗುತ್ತದೆ. ಕೈಲಿ ಕೋವಿಯಿದೆ. ಬೆನ್ನ ಹಿಂದೆ ಘಟಾನುಘಟಿ ಪೊಲೀಸರಿದ್ದಾರೆ. ಇಷ್ಟಿದ್ದೂ ವೀರಪ್ಪನ್ನನ್ನು ಯಾಕೆ ಹಿಡಿದು ತಂದು ನಿಲ್ಲಿಸುತ್ತಿಲ್ಲ ಅಂತ ಕೇಳಿದರೆ, ಅವರು ತೊದಲುತ್ತಾರೆ.
ಅದಿರಲಿ, ಈಗ ವೀರಪ್ಪನ್ ಯಾರನ್ನು ಅಪಹರಿಸಲು ಸಂಚು ಹೊಸೆಯುತ್ತಿರಬಹುದು? ರಾಜೂಗೌಡರ ಹಣೆ ಮೇಲೆ ಈಗಾಗಲೇ ಬೆವರ ಹನಿಗಳು ನಿಂತಿವೆಯಂತೆ !
ಕರೀಂಗೆ ಒಲಿದ ಸುಪ್ರಿಂಕೋರ್ಟು : ವೀರಪ್ಪನ್ ಒತ್ತೆಯಿಂದ ಡಾ.ರಾಜ್ಕುಮಾರ್ ಅವರನ್ನು ಬಿಡಿಸಿ ತರುವ ವಿಷಯದಲ್ಲಿ ಅನೇಕ ಆರೋಪಿಗಳನ್ನು ಮೈಸೂರು ಟಾಡಾ ಕೋರ್ಟು ಖುಲಾಸೆಗೊಳಿಸಿತ್ತು. ಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಕರೀಂ ಸುಪ್ರಿಂಕೋರ್ಟ್ಗೆ ಅರ್ಜಿ ಹಾಕಿದ್ದರು. ಶುಕ್ರವಾರ (ಜು.18) ಅರ್ಜಿಯನ್ನು ಪರಿಶೀಲಿಸಿದ ಸುಪ್ರಿಂಕೋರ್ಟಿನ ಪೀಠ ಮೈಸೂರು ಟಾಡಾ ಕೋರ್ಟಿನ ತೀರ್ಪಿನ ವಿರುದ್ಧ ಅಪೀಲು ಹಾಕಲು ಕರೀಂ ಅವರಿಗೆ ಅನುಮತಿ ಕೊಟ್ಟಿತು.
ಈಗಾಗಲೇ ಸುಪ್ರಿಂಕೋರ್ಟಿನಿಂದ ಸಾಕಷ್ಟು ಲಾತಾ ತಿಂದಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಇನ್ನೂ ಏನೇನು ಗ್ರಹಚಾರ ಕಾದಿದೆಯೋ?
ಮುಖಪುಟ / ವೀರಪ್ಪನ್












Click it and Unblock the Notifications