ಪಾಕ್ ಪುಟಾಣಿ ನೂರ್ ಫಾತಿಮಾಗೆ ಬೆಂಗಳೂರಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಪಾಕ್ ಪುಟಾಣಿ ನೂರ್ ಫಾತಿಮಾಗೆ ಬೆಂಗಳೂರಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ನಾರಾಯಣ ಹೃದಯಾಲಯದಲ್ಲಿ ಚೇತರಿಸಿಕೊಳ್ಳುತ್ತಿರುವ ಪಾಕಿಸ್ತಾನದ ಹುಡುಗಿಯ ನೆರವಿಗೆ ನೂರಾರು ಹಸ್ತ
ಭಾರತ ಹಾಗೂ ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಜೀವಗೊಂಡ ಹಿನ್ನೆಲೆಯಲ್ಲಿ ಪುನರ್ ಆರಂಭಗೊಂಡ ಲಾಹೋರ್-ದೆಹಲಿ ಬಸ್ನಲ್ಲಿ ಪೋಷಕರೊಂದಿಗೆ ನೂರ್ ಭಾರತಕ್ಕೆ ಆಗಮಿಸಿದ್ದಳು. ನೂರ್ ಫಾತಿಮಾಳಿಗೆ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ನಡೆಸುವಂತೆ ಪಾಕಿಸ್ತಾನದ ವೈದ್ಯರು ಸಲಹೆ ನೀಡಿದುದರಿಂದ, ಪುಟಾಣಿಯನ್ನು ಬೆಂಗಳೂರಿಗೆ ಕರೆ ತರಲಾಗಿತ್ತು .
ನೂರ್ಳ ಹೃದಯದಲ್ಲಿ ಹಲವಾರು ರಂಧ್ರಗಳಿದ್ದು ಶಸ್ತ್ರಚಿಕಿತ್ಸೆ ಕಠಿಣವಾಗಿತ್ತು ಎಂದು ನಾರಾಯಣ ಹೃದಯಾಲಯದ ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು , ನೂರ್ ಚೇತರಿಸಿಕೊಳ್ಳುತ್ತಿದ್ದಾಳೆ.
ಮಂಗಳವಾರ ಬೆಳಗ್ಗೆ ನೂರ್ಳ ದೇಹ ಇದ್ದಕ್ಕಿದ್ದಂತೆ ನೀಲಿಯಾಗತೊಡಗಿದ್ದರಿಂದ ಅವಳಿಗೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಯಿತು. ಶಸ್ತ್ರಚಿಕಿತ್ಸೆಯ ನಂತರ ನೂರ್ಳ ಹೃದಯ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಆಕೆಯನ್ನು ಎರಡು ಮೂರು ದಿನಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಉಪಚರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ನೆರವಿನ ಪೂರ : ಎರಡು ವರ್ಷದ ನೂರ್ ಫಾತಿಮಾಳಿಗೆ ನೆರವು ನೀಡಲು ದೇಶದ ವಿವಿಧ ಭಾಗಗಳ ನೂರಾರು ಮಂದಿ ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾತ್ರವಲ್ಲದೆ, ನೂರ್ಳ ಭವಿಷ್ಯದ ದಿನಗಳಿಗೂ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ ಎಂದು ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications