ಪೀಣ್ಯ ಅಲ್ಲವೀಗಉದ್ಯೋಗ ಮೆಕ್ಕ, ಅಲ್ಲೇನಿದ್ದರೂ ಆತ್ಮಹತ್ಯೆಯ ಲೆಕ್ಕ
ಪೀಣ್ಯ ಅಲ್ಲವೀಗಉದ್ಯೋಗ ಮೆಕ್ಕ, ಅಲ್ಲೇನಿದ್ದರೂ ಆತ್ಮಹತ್ಯೆಯ ಲೆಕ್ಕ
30 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ
ಬೆಂಗಳೂರು : ದಿನವೊಂದಕ್ಕೆ ನೂರಾರು ಹೊಸ ಮುಖಗಳಿಗೆ ಕೆಲಸ ಕೊಟ್ಟು ಸಲಹುತ್ತಿದ್ದ ಪೀಣ್ಯ ಕೈಗಾರಿಕಾ ನಗರ ಈಗ ಕಾರ್ಖಾನೆ ಕೆಲಸ ಕೊಡುವ ಮೆಕ್ಕಾ ಆಗಿ ಉಳಿದಿಲ್ಲ. ಸ್ಮಶಾನ ಭರ್ತಿಯಾಗುವಂತೆ ಇಲ್ಲಿ ಹೆಣಗಳುರುತ್ತಿವೆ.
ಡಬ್ಬಗಳಿಗೆ ಮುಚ್ಚಳ ತಯಾರಿಸುವ ಸಣ್ಣ ಉದ್ದಿಮೆಯಿಂದ ಹಿಡಿದು ಕಾರಿಗೆ ಎಂಜಿನ್ನಕೂಡಿಸುವವರೆಗಿನ ದೊಡ್ಡ ಕೈಗಾರಿಕೆಗಳ ಸದ್ದನ್ನು ಅಡಗಿಸಿಟ್ಟುಕೊಂಡಿದ್ದ ಪೀಣ್ಯದಲ್ಲಿ ಪ್ರತಿ ನಾಲ್ಕು ದಿನಕ್ಕೊಮ್ಮೆ ಈಗ ಗೋಳೋ ಎನ್ನುವ ಚೀತ್ಕಾರ ಕೇಳುತ್ತಿದೆ. ಯಾಕೆಂದರೆ, ಇಲ್ಲಿ ನಾಲ್ಕು ದಿನಕ್ಕೊಂದು ಆತ್ಮಹತ್ಯೆ ಗ್ಯಾರಂಟಿ !
ಕೆಲವು ವರ್ಷಗಳ ಹಿಂದೆ ಕೇವಲ ಕೈಗಾರಿಕೆಗಳ ಒಕ್ಕೂಟದವರು ಆಗಾಗ ಹೂಡುತ್ತಿದ್ದ ಮುಷ್ಕರ ವಗೈರೆ ಗಲಾಟೆಗಳೇ ಕಾಣುತ್ತಿದ್ದ ಪೀಣ್ಯ ಪೊಲೀಸ್ ಪುಸ್ತಕದಲ್ಲೀಗ ಆತ್ಮಹತ್ಯೆ ಹಾಗೂ ಕಳವು ಪ್ರಕರಣಗಳು ಬಹಳವಾಗಿ ಭರ್ತಿಯಾಗುತ್ತಿವೆ. ಇದಕ್ಕೆಲ್ಲ ಮೂಲ ಕಾರಣ ಸ್ಲೋಡೌನು.
ಒಂದು ಕಾಲದಲ್ಲಿ ಕೆಲಸಕ್ಕೆ ಅತಿ ಸೇಫು ಎಂಬ ಅಗ್ಗಳಿಗೆ ಗಳಿಸಿದ್ದ ಎನ್ಜಿಇಎಫ್ನಂಥಾ ಕಾರ್ಖಾನೆಗಳೇ ಠುಸ್ಸಾದಾಗ ಸಣ್ಣ ಪುಟ್ಟ ಕೈಗಾರಿಕೆಗಳು ಹೇಗೆ ತಾನೆ ಉಸಿರಾಡಿಯಾವು? ಪರಿಣಾಮ ಕಾರ್ಖಾನೆಗಳು ವ್ಯಾಪಕವಾಗಿ ದಿಡ್ಡಿ ಬಾಗಿಲು ಹಾಕುತ್ತಿವೆ. ಕೆಲಸ ಕಳೆದುಕೊಂಡು, ಬೇರೆ ಕೆಲಸ ಸಿಗದೆ ಹತಾಶರಾದ ಅನೇಕರು ಒಂದೋ ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ಇಲ್ಲವೇ, ನೇಣಿಗೋ ಪಾಲಿಡಾಲಿಗೋ ಶರಣುಹೋಗುತ್ತಿದ್ದಾರೆ.
ಪೀಣ್ಯ ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಣ್ಣ ಅವರು ಕೊಡುವ ಕೆಲವು ಅಂಕಿ- ಅಂಶಗಳನ್ನು ಕೇಳಿ-
- ಕೆಲಸ ಕೊಡುವ ವಿಷಯದಲ್ಲಿ ಮೆಕ್ಕಾ ಎಂಬ ಭಾವನೆ ಒಂದು ಕಾಲದಲ್ಲಿತ್ತು. ಹಾಗಾಗಿ ಬೇರೆ ಬೇರೆ ಊರುಗಳಿಂದ ಕಾರ್ಮಿಕರು ಇಲ್ಲಿಗೆ ಬಂದು ಸೇರಿಕೊಂಡರು. ಪೀಣ್ಯದಲ್ಲಿರುವ ಮಂದಿಯ ಪೈಕಿ ಪ್ರತಿಶತ 60ರಷ್ಟು ಹೊರಗಿನವರು.
- ಕಳೆದ ವರ್ಷ (2002) ಆತ್ಮಹತ್ಯೆಯ ಸಂಖ್ಯೆ ಇನ್ನೂ ಹೆಚ್ಚಾಗಿತ್ತು. ಈಗ ಸರಾಸರಿ 4 ದಿನಕ್ಕೊಂದು ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿದೆ.
- ಕಂಪನಿಗಳು ಮುಚ್ಚಿಕೊಂಡು ಹೋಗುತ್ತಿರುವುದರಿಂದ ಸಂಸಾರಸ್ಥರಿಗೆ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲ. ಉತ್ತರ ಕರ್ನಾಟಕದಿಂದ ಬಂದ ಅನೇಕರಿಗೆ ಇಲ್ಲಿ ಯಾವುದೇ ಉಳಿತಾಯವಾಗಲೀ, ಆಸ್ತಿಯಾಗಲೀ ಇರುವುದಿಲ್ಲ. ಅಂಥವರ ಪೈಕಿ ಅವಿವಾಹಿತ ಯುವಕರು ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ಸಾಲ ಮಾಡಿ, ಇನ್ನು ಏನೂ ಮಾಡಲು ದಿಕ್ಕು ತೋಚದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
- 2002- 03ನೇ ಇಸವಿಯಲ್ಲಿ ಒಟ್ಟು 80 ಮಂದಿ ಬದುಕು ಸಾಕಾಗಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಲಾಕ್ಔಟಾದ ಕಾರ್ಖಾನೆಗಳಿಗೆ ನುಗ್ಗಿ, ಅಲ್ಲಿರುವ ಮಷೀನುಗಳನ್ನು ಕದ್ದು ಮಾರುವುದು ಕೂಡ ವ್ಯಾಪಕವಾಗುತ್ತಿದೆ. ಇಂಥಾ 15ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
- ಕಾರ್ಖಾನೆ ಮುಚ್ಚಿದ ನಂತರ ಕೆಲವರಿಗೆ ಅಷ್ಟೋ ಇಷ್ಟೋ ದುಡ್ಡು ಬರುತ್ತದಲ್ಲ, ಅಂಥವರು ಆಟೋರಿಕ್ಷಾ ಓಡಿಸುವುದಕ್ಕೆ ಶುರುಮಾಡಿದ್ದಾರೆ. ಹೆಚ್ಚು ಬಂಡವಾಳ ಇರುವವರು ಸಣ್ಣ ಪುಟ್ಟ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ.
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications