‘ಅಕ್ಷರ ದಾಸೋಹ’ : 40,000 ಅಡುಗೆಮನೆಗಳ ಕಟ್ಟಲು ನಿರ್ಧಾರ
‘ಅಕ್ಷರ ದಾಸೋಹ’ : 40,000 ಅಡುಗೆಮನೆಗಳ ಕಟ್ಟಲು ನಿರ್ಧಾರ
ನರಗುಂದದಲ್ಲಿ 234 ಮಕ್ಕಳು ಬಿಸಿಯೂಟ ಉಂಡು ಆಸ್ಪತ್ರೆಗೆ : ತನಿಖೆಗೆ ಆದೇಶ
ರಾಜ್ಯ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಶುಕ್ರವಾರ (ಜು.04) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಗದಗ ಜಿಲ್ಲೆಯ ಉಪ ಆಯುಕ್ತರಿಗೆ ಪ್ರಕರಣದ ಸಮಗ್ರ ತನಿಖೆ ನಡೆಸಲು ಆದೇಶ ಕೊಟ್ಟಿದ್ದೇವೆ. ‘ಅಕ್ಷರ ದಾಸೋಹ’ ಸರ್ಕಾರದ ಮಹತ್ವದ ಯೋಜನೆ. ಇದರಲ್ಲಿ ಇನ್ನು ಮುಂದೆ ಈ ರೀತಿಯ ಬೇಜವಾಬ್ದಾರಿತನ ನಡೆದರೆ, ಅದಕ್ಕೆ ಕಾರಣರಾದವರಿಗೆ ಸರ್ಕಾರ ತಕ್ಕ ಶಾಸ್ತಿ ಮಾಡಲಿದೆ ಎಂದು ಪಾಟೀಲ್ ಎಚ್ಚರಿಸಿದರು.
ಗುರುವಾರ ನರಗುಂದದಲ್ಲಿ ‘ಅಕ್ಷರ ದಾಸೋಹ’ದ ಬಿಸಿಯೂಟ ಉಂಡ 234 ಮಕ್ಕಳು ಆಸ್ಪತ್ರೆಗೆ ಸೇರಿದ್ದರು. ಇದರಿಂದ ರೊಚ್ಚಿಗೆದ್ದ ಜನ ಭಾರೀ ಪ್ರತಿಭಟನೆ ನಡೆಸಿದ್ದರು. ಶಿಕ್ಷಣ ಇಲಾಖೆಯವರು ಈ ಪ್ರಕರಣ ಕುರಿತು ತನಿಖೆ ನಡೆಸುವರೆಂದು ಜನರನ್ನು ಸಮಾಧಾನ ಮಾಡಲಾಗಿತ್ತು.
ಕೋಟ್ಯಂತರ ರುಪಾಯಿ ಯೋಜನೆಯಾದ ಅಕ್ಷರ ದಾಸೋಹ ಶುರುವಾದ ಮೊದಲ ವಾರದಲ್ಲೇ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅಡುಗೆ ಮಾಡುವವರ ಜಾತಿಯ ಕಾರಣಕ್ಕೆ, ಗುತ್ತಿಗೆ ಇಂಥವರಿಗೇ ಕೊಡಬೇಕೆಂಬ ಕಾರಣಕ್ಕೆ, ಊಟ ಅರೆಬೆಂದಿದೆ ಎಂಬ ಕಾರಣಕ್ಕೆ ಜಗಳಗಳು ನಡೆದು, ಅಕ್ಷರಕ್ಕಿಂತ ಬಿಸಿಯೂಟ ಸಾಕಷ್ಟು ಕಿರಿಕ್ಕುಗಳಿಗೆ ಎಡೆಮಾಡಿಕೊಟ್ಟಿದೆ.
ನಡೆದ ಘಟನಾವಳಿಗಳನ್ನು ಮುಖ್ಯ ಕಾರ್ಯದರ್ಶಿ ಗಮನಕ್ಕೆ ಮತ್ತೆ ತಂದಾಗ, ಇನ್ನು ಮುಂದೆ ಇಂಥಾ ಅವ್ಯವಸ್ಥೆಯಾಗದಂತೆ ನಿಗಾ ವಹಿಸುತ್ತೇವೆ ಎಂದು ಭರವಸೆ ಕೊಟ್ಟರು. ಸದ್ಯಕ್ಕೆ ರಾಜ್ಯದ 7 ಜಿಲ್ಲೆಗಳಲ್ಲಿ ಶುರುವಾಗಿರುವ ಅಕ್ಷರ ದಾಸೋಹ ಇನ್ನೆರಡು ತಿಂಗಳಲ್ಲಿ 20 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಈವರೆಗೆ ಏನೇನು ತೊಂದರೆಗಳಾಗಿವೆಯೋ ಅವನ್ನು ಸರಿಪಡಿಸಿಕೊಂಡು ಹೆಜ್ಜೆಯಿಡುವುದು ಹೇಗೆ ಎಂದು ಸಭೆ ನಡೆಸಿ ಚರ್ಚಿಸಿದೆವು ಎಂದು ಪಾಟೀಲ್ ಹೇಳಿದರು.
ಪಾಟೀಲರು ಹೇಳಿದಂತೆ ಮುಂದೆ ಏನೇನಾಗುತ್ತದೆ?
- ಅಡುಗೆಮನೆಯ ತಾರತಮ್ಯ, ವ್ಯಾಜ್ಯಗಳನ್ನು ನಿಲ್ಲಿಸುವ ಸಲುವಾಗಿ ಸರ್ಕಾರವೇ 40 ಸಾವಿರ ಅಡುಗೆಮನೆಗಳನ್ನು ಅಕ್ಷರ ದಾಸೋಹಕ್ಕಾಗೇ ಕಟ್ಟಲಿದೆ. ಈ ವರ್ಷ ಕನಿಷ್ಠ 20 ಸಾವಿರ ಅಡುಗೆ ಮನೆಗಳನ್ನಾದರೂ ಕಟ್ಟಬೇಕೆಂಬುದು ಸರ್ಕಾರದ ಕನಸು.
- ದಲಿತರನ್ನು ಅಡುಗೆ ಮಾಡಲು ನೇಮಿಸಲಾಗಿದೆ ಎಂದು ಅನೇಕರು ತಗಾದೆ ತೆಗೆದಿರುವುದಕ್ಕೆ ಸೊಪ್ಪು ಹಾಕುವುದಿಲ್ಲ.
- ಈಗ ಆಗಿರುವ ತೊಂದರೆಗಳನ್ನೇ ನೆಪ ಮಾಡಿ, ಇಡೀ ಯೋಜನೆಯನ್ನೇ ರದ್ದು ಮಾಡಬೇಕೆಂಬ ಪ್ರತಿಭಟನೆಗೆ ಸರ್ಕಾರ ಜಗ್ಗುವುದಿಲ್ಲ.
ಪೂರಕ ಓದಿಗೆ-
ಅಕ್ಷರದಾಸೋಹ ಅವ್ಯವಸ್ಥೆಯೂ ಸರ್ಕಾರಿತನವೂ
ಮುಖಪುಟ / ವಾರ್ತೆಗಳು












Click it and Unblock the Notifications