ಕಾವೇರಿಕೊಳ್ಳದಲ್ಲೂ ಗೌಡರ ಗದ್ದಲ : ಅ.10ರಿಂದ ಕೌಂಟರ್ ಯಾತ್ರೆ!
* ದಟ್ಸ್ಕನ್ನಡ ಬ್ಯೂರೋ
ಬೆಂಗಳೂರು : ಕಾವೇರಿ ಚಳವಳಿಗೆ ಚುನಾವಣಾ ಪ್ರಚಾರದ ಕಳೆ ಕೊಡಲು ಮಾಜಿ ಪ್ರಧಾನಿ ದೇವೇಗೌಡರು ಸಿದ್ಧರಾಗಿದ್ದಾರೆ. ಮುಖ್ಯಮಂತ್ರಿ ಕೃಷ್ಣ ಕೈಮುಗಿಯುತ್ತಾ ಪಾದಯಾತ್ರೆ ಹೊರಟಿದ್ದೇ ತಡ, ದೇವೇಗೌಡರು ಮೌನ ಮುರಿದು, ಮೈಕೊಡವಿ ಮೇಲೆದ್ದಿದ್ದಾರೆ. ಕೃಷ್ಣ ಇತ್ತಕಡೆಯಿಂದ ಪಾದಯಾತ್ರೆ ಹೊರಟಿದ್ದರೆ, ಗೌಡರು ಕಾವೇರಿ ಜನ್ಮಸ್ಥಳದಿಂದ ಕೃಷ್ಣ ವಿರುದ್ಧ ಪ್ರಚಾರ ಶುರುವಿಡಲಿದ್ದಾರೆ !
ಅಕ್ಟೋಬರ್ 10ರಿಂದ 13ರವರೆಗೆ ದೇವೇಗೌಡರ ಈ ಕೌಂಟರ್ ಅಭಿಯಾನ ಪ್ರಾರಂಭವಾಗಲಿದೆ. ಕಾವೇರಿ ಉಗಮ ಸ್ಥಳ ಭಾಗಮಂಡಲದಿಂದ ಕಾವೇರಿ ಜಲಾನಯನ ಪ್ರದೇಶದ ಮಹಾಜನತೆ ಮುಂದೆ ಕೃಷ್ಣ ನಿಜವಾದ ಬಣ್ಣ ಬಯಲು ಮಾಡುತ್ತೇನೆಂದು ಗೌಡರು ಮಂಗಳವಾರ ಕೆನೆದಿದ್ದಾರೆ. ಇವರಿಗೆ ಬ್ಯಾಕ್ಅಪ್ ಆಗಿ ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮತ್ತಿತರ ಸಂಯುಕ್ತ ಜನತಾ ದಳದ ಮುಖಂಡರು ಇದ್ದಾರೆ.
ಕಾವೇರಿ ಸಮಸ್ಯೆ ವಿಷಯದಲ್ಲಿ ತಣ್ಣಗಿದ್ದ ‘ಮಣ್ಣಿನ ಮಗ’ ಈಗ ಕೃಷ್ಣ ವರಸೆಗೆ ಪ್ರತಿ ವರಸೆ ತೋರುವ ಸಂಕಲ್ಪ ತೊಟ್ಟಿದ್ದಾರೆ. ತಮ್ಮ ಕೌಂಟರ್ ಅಭಿಯಾನದ ವಿಚಾರ ಹೇಳಲು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಗೌಡರು ಕೃಷ್ಣ ಸರ್ಕಾರವನ್ನು ಎಕ್ಕಾಮಕ್ಕಾ ತರಾಟೆಗೆ ತೆಗೆದುಕೊಂಡರು.
ಸರ್ವ ಪಕ್ಷಗಳ ಸಭೆಯಲ್ಲಿ ಪಾದಯಾತ್ರೆ ಹೋಗುವ ಮಾತಾಡಲಿಲ್ಲ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ತೀರ್ಮಾನಕ್ಕೆ ಕಟ್ಟುಬಿದ್ದು ಆಗಿತ್ತು. ರೈತರು ಮತ್ತು ಚಳವಳಿಕಾರರಿಗೆ ಇಷ್ಟೇ ಸಾಕಿತ್ತು. ಹಾಗಿದ್ದೂ ಮುಖ್ಯಮಂತ್ರಿಗಳು ಪಾದಯಾತ್ರೆ ನಡೆಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಗೌಡ, ಇದು ರಾಜಕೀಯ ಅವಕಾಶವಾದಿತನ ಅಷ್ಟೆ ಎಂದರು.ಕಷ್ಟಕಾಲದಲ್ಲಿ ವಿರೋಧ ಪಕ್ಷಗಳು ಸರ್ಕಾರದ ನೊಗಕ್ಕೆ ಹೆಗಲು ಕೊಟ್ಟವು. ಹಾಗಂತ ಕಾವೇರಿ ಸಮಸ್ಯೆಯನ್ನು ಕಾಂಗ್ರೆಸ್ ಸರ್ಕಾರ ಬೇಲಿ ಮೇಲಿನ ಟವಲು ತೆಗೆದಂತೇನೂ ನಿರ್ವಹಿಸಿಲ್ಲ. ಬಿಕ್ಕಟ್ಟು ತೊಡೆಯುವಲ್ಲಿ ಅದು ವಿಫಲವಾಗಿದೆ. ತಾನು ಮಾಡಿರುವ ತಪ್ಪುಗಳನ್ನು ಮುಚ್ಚಿ ಹಾಕಲು ಈಗ ಪಾದಯಾತ್ರೆಯೆಂಬ ನಾಟಕ ಶುರುವಾಗಿದೆ. ಒಂದು ಚುನಾಯಿತ ಸರ್ಕಾರ ಈ ರೀತಿ ಮಾಡಬಹುದೇ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತರಿಸಲಿ ಎಂದು ಸವಾಲೆಸೆದಿದ್ದಾರೆ.
ಗೌಡರು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಕಾಂಗ್ರೆಸ್ ಸರ್ಕಾರವು ಕಾವೇರಿ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಹೇಗೆ ವಿಫಲವಾಗಿದೆ ಎಂಬ ಸಕಲ ವಿವರಗಳನ್ನು ಬರೆದು, ಒಂದು ಪುಸ್ತಕವನ್ನೇ ಜನರಿಗೆ ಹಂಚಲೂ ತೀರ್ಮಾನಿಸಿದ್ದಾರೆ.
ತೆರೆಮರೆಯ ವಿವರ !
ಒಂದು ತೆರೆಮರೆಯ ಸತ್ಯ ಹೊರಬಿತ್ತು. ಮುಖ್ಯಮಂತ್ರಿ ಕೃಷ್ಣ ಅವರಿಗೆ ಪಾದಯಾತ್ರೆಯ ಐಡಿಯಾ ಕೊಟ್ಟಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಗೌಡರ ಹಳೆಯ ವೈರಿ ಎನ್ನಲಾಗುವ ರಾಮಕೃಷ್ಣ ಹೆಗಡೆ. ಈ ವಿಷಯ ದೇವೇಗೌಡರ ಕಿವಿಗೆ ಬಿದ್ದದ್ದೇ ತಡ ಸಹಜವಾಗಿ ಕೆನೆದಾಟ ಶುರುವಾಗಿದೆ !
ಮಧ್ಯಂತರ ಚುನಾವಣೆ ಹತ್ತಿರವಾಗಿದೆ ಅಂತ ನಿಮಗನ್ನಿಸುತ್ತಿದೆಯೇ, ಅದಕ್ಕೇ ಈ ರ್ಯಾಲಿಗೆ ತೀರ್ಮಾನಿಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ, ಗೌಡರು ಜಾಣ ಕಿವುಡರಾಗಿ ಸುಮ್ಮನೆ ನಿಂತುಬಿಟ್ಟರು.
ಕಾವೇರಿಯಂಥಾ ಸೂಕ್ಷ್ಮ ಹಾಗೂ ಗಂಭೀರ ಸಮಸ್ಯೆ ಮುಂದಿರುವಾಗ ಮಧ್ಯಂತರ ಚುನಾವಣೆ ಬಂದೇ ಬಿಟ್ಟಿತೆಂಬಂತೆ ರಾಜಕೀಯ ನಾಯಕರು ಬೀದಿಗಿಳಿದು, ರಾಡಿ ಎರಚಾಡುತ್ತಿರುವುದು ಹೇಯಕರ. ಬನ್ನಿ, ಇಂಥಾ ನಡಾವಳಿಗಳನ್ನು ಖಂಡಿಸಿ.
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications