ಕಾವೇರಿ : ಸುಪ್ರಿಂಕೋರ್ಟ್ ವ್ಯಾಪ್ತಿ ಪ್ರಶ್ನಿಸಿ ಕರ್ನಾಟಕದ ತಕರಾರು ಅರ್ಜಿ
ನವದೆಹಲಿ : ಕಾವೇರಿ ಜಲವಿವಾದ ಕುರಿತಂತೆ ಕರ್ನಾಟಕದ ವಿರುದ್ಧ ತಮಿಳುನಾಡು ಸಲ್ಲಿಸಿರುವ ನ್ಯಾಯಾಲಯ ನಿಂದನೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರಿಂಕೋರ್ಟ್ನ ವ್ಯಾಪ್ತಿಯನ್ನು ಪ್ರಶ್ನಿಸಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಗುರುವಾರ ತಕರಾರು ಅರ್ಜಿ ಸಲ್ಲಿಸಿದರು.
ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ತಮಿಳುನಾಡು ಗಾಳಿಗೆ ತೂರಿದೆ. ಪ್ರಧಾನಿ ನೇತೃತ್ವದಲ್ಲಿ ರಚಿತವಾಗಿರುವ ಪ್ರಾಧಿಕಾರಕ್ಕೆ ಮಾತ್ರ ಕಾವೇರಿ ಜಲವಿವಾದ ಸಮಸ್ಯೆ ಬಗೆಹರಿಸುವ ಅಧಿಕಾರವಿದೆ. ಸುಪ್ರಿಂಕೋರ್ಟ್ ವ್ಯಾಪ್ತಿಗೆ ಈ ವಿಚಾರ ಬರುವುದಿಲ್ಲ ಎಂದು ತಕರಾರು ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ಕೃಷ್ಣ ಸುದ್ದಿಗಾರರಿಗೆ ಹೇಳಿದರು.
ಸುಪ್ರಿಂಕೋರ್ಟ್ ಆದೇಶದಂತೆ ಸೆಪ್ಟೆಂಬರ್ 4ರಿಂದ 8ನೇ ತಾರೀಖಿನ ಅವಧಿಯಲ್ಲಿ ಕರ್ನಾಟಕ ಒಟ್ಟು 3.5 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ಬಿಳಿಗುಂಡು ಜಲಾನಯದ ಒಳಹರಿವಿನಿಂದ ಉಳಿದ ನೀರೂ ತಮಿಳುನಾಡಿಗೆ ತಲುಪಿರುತ್ತದೆ. ಕಾವೇರಿ ನದಿ ಪ್ರಾಧಿಕಾರ ಆದೇಶದಂತೆ 15 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ನಾವು 8 ಟಿಎಂಸಿ ನೀರು ಬಿಟ್ಟಿದ್ದೇವೆ. ಆದ್ದರಿಂದ ಕರ್ನಾಟಕ ಸರ್ಕಾರ ಯಾವ ಆದೇಶದ ನಿಂದನೆಯನ್ನೂ ಮಾಡಿಲ್ಲ ಎಂದು ಕೃಷ್ಣ ಸ್ಪಷ್ಟಪಡಿಸಿದರು.
ಕರ್ನಾಟಕದ ವಿರುದ್ಧ ತಮಿಳುನಾಡಿನ ನ್ಯಾಯ ನಿಂದನೆ ಅರ್ಜಿಯ ವಿಚಾರಣೆ ಸುಪ್ರಿಂಕೋರ್ಟ್ನಲ್ಲಿ ಶುಕ್ರವಾರ ನಡೆಯಲಿದೆ.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ