ಮಗಳು ಅಳಿಯನ ಕೊಲೆಗೈದ ಆರೋಪಿ ತಂದೆ ಮತ್ತು ಬಂಧುಗಳ ಬಂಧನ
ಬೆಂಗಳೂರು : ಅಂತರ್ಜಾತಿಯ ವಿವಾಹವಾಗಿದ್ದ ಮಗಳು ಮತ್ತು ಅಳಿಯನ ಹತ್ಯೆಗೈದು ಮೊಮ್ಮಗಳನ್ನು ಅಪಹರಿಸಿದ್ದ ತಂದೆ, ಮಗ ಮತ್ತಿತರ ನಾಲ್ವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬಿಸ್ಮಿಲ್ಲಾನಗರದ ವಹೀದ್ ಖಾನ್(62), ಅವರ ಮಗ ಆಸ್ಗರ್(22), ಮತ್ತು ಸ್ನೇಹಿತರಾದ ಹಳೇ ಗುರಪ್ಪನ ಪಾಳ್ಯದ ಸಮೀರ್ (22) ಹಾಗೂ ಬಿಸ್ಮಿಲ್ಲಾ ನಗರದ ಬಾಬು (21) ಬಂಧಿತ ಆರೋಪಿಗಳು. ಜೂನ್ 5ರಂದು ಪಾಲ್ ರಾಜ್ ಹಾಗೂ ಸಮೀನಾ ಎಂಬ ದಂಪತಿಯನ್ನು ಕೊಂದು ಒಂದು ವರ್ಷದ ಪುಟ್ಟ ಮಗು ಬೆನಡಿಟ್ಳನ್ನು ಬಂಧಿತರು ಅಪಹರಿಸಿದ್ದ ರು.
ಏಳು ಮಂದಿ ಗಂಡು ಮಕ್ಕಳ ನಡುವೆ ಏಕೈಕ ಪುತ್ರಿಯಾಗಿ ಬೆಳೆದ ಸಮೀನಾ ಸ್ವಜಾತಿಯವನನ್ನೇ ಮದುವೆಯಾಗದೇ ಬೇರೊಬ್ಬನನ್ನು ಪ್ರೀತಿಸಿದ್ದಳು . ಇದನ್ನು ತಂದೆಯ ಹೃದಯ ಸಹಿಸಿಲ್ಲ. ಮದುವೆಯಾದ ನಂತರ ತಮಗೆ ತಮ್ಮ ಬಂಧುಗಳಿಂದಲೇ ಪ್ರಾಣಭಯ ಇರುವುದಾಗಿ ಪಾಲ್ರಾಜ್ ಮತ್ತು ಸಮೀನಾ ದಂಪತಿ ಆಗಿನ ಪೊಲೀಸ್ ಕಮಿಷನರ್ಗೆ ಲಿಖಿತ ದೂರು ನೀಡಿದ್ದರು. ಆದರೆ ಕೊನೆಗೂ ಮಗಳ ಬಲಿ ತೆಗೆದುಕೊಳ್ಳುವಲ್ಲಿ ವಹೀದ್ ಖಾನ್ ಯಶಸ್ವಿಯಾಗಿದ್ದರು.
ತಬ್ಬಲಿಯಾಗಿರುವ ಬೆನಡಿಟ್ಳನ್ನು ಆಶ್ರಯ ಪುನರ್ವಸತಿ ಸಂಸ್ಥೆಗೆ ಒಪ್ಪಿಸಲಾಗಿದೆ. ಬೆನಡಿಟ್ಳ ಸಂಬಂಧಿಕರು ಆಕೆಯನ್ನು ಸಾಕಲು ಹಿಂಜರಿದ ಕಾರಣ ಪೊಲೀಸ್ ಕಮಿಷನರ್ ಸಾಂಗ್ಲಿಯಾನಾ ಈ ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ತಂಡಕ್ಕೆ ಸಾಂಗ್ಲಿಯಾನಾ 25, 000 ರೂಪಾಯಿ ಬಹುಮಾನ ಘೋಷಿಸಿದ್ದು, ಅದನ್ನು ಬೆನಡಿಟ್ಳಿಗಾಗಿ ಬ್ಯಾಂಕಿನಲ್ಲಿ ಠೇವಣಿ ಇಡಲು ನಿರ್ಧರಿಸಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications