ವಿದೇಶೀ ಕನ್ನಡಿಗರ ಮರೆತುಬಿಟ್ಟ ಆಕಾಶವಾಣಿಯ ವಿದೇಶೀ ಸೇವಾ ವಿಭಾಗ !
ಬೆಂಗಳೂರು: ನಗರದ ಹೊರವಲಯದಲ್ಲಿ ಸ್ಥಾಪಿಸಲಾಗಿರುವ ಆಕಾಶವಾಣಿಯ ವಿದೇಶಿ ಸೇವೆಗಳ ವಿಭಾಗದ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡದೇ ಇರುವುದನ್ನು ಕನ್ನಡಿಗರ ವೇದಿಕೆ ವಿರೋಧಿಸಿದೆ.
ಆಕಾಶವಾಣಿಯ ಈ ಕ್ರಮದ ವಿರುದ್ಧ ಮೇ 21ರಂದು ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಿಗರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.
ವಿದೇಶೀ ಸೇವೆಗಳ ವಿಭಾಗದಲ್ಲಿ ಹಿಂದಿ, ತಮಿಳು, ತೆಲುಗು, ಬಂಗಾಳಿ, ಮಲಯಾಳಿ, ಗುಜರಾತಿ, ಮರಾಠಿ, ಪಂಜಾಬಿ ಹಾಗೂ ಉರ್ದು ಭಾಷೆಗಳ ಗೀತೆಗಳನ್ನೂ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮಗಳು ಕೂಡ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಕನ್ನಡ ಭಾಷೆಗೆ ಮಾತ್ರ ಈ ಆಕಾಶವಾಣಿಯಲ್ಲಿ ಯಾಕೆ ಸ್ಥಾನವಿಲ್ಲ ಎಂದು ಪ್ರಭಾಕರ ರೆಡ್ಡಿ ಪ್ರಶ್ನಿಸಿದ್ದಾರೆ.
ವಿದೇಶೀ ಕನ್ನಡಿಗರಿಗಾಗಿ ಕನ್ನಡದ ಕಂಪನ್ನು ಬಿತ್ತರಿಸುವ ಕೆಲಸ ಈ ಆಕಾಶವಾಣೀ ಕೇಂದ್ರದಿಂದ ನಡೆಯಬೇಕಿತ್ತು. ಆದರೆ ಆಕಾಶವಾಣಿಯ ಅಧಿಕಾರಿಗಳು ಆ ಬಗ್ಗೆ ಗಮನಕೊಡುತ್ತಿಲ್ಲ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮಧ್ಯಪ್ರವೇಶಿಸಿ ಅಥವಾ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಮಾಡಬೇಕು ಎಂದು ರೆಡ್ಡಿ ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...