ಗುಲ್ಬರ್ಗಾದಲ್ಲೇ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಸಚಿವತ್ರಯರ ಒತ್ತಾಯ
ಗುಲ್ಬರ್ಗ: ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಆಗ್ರಹಕ್ಕೆ ಮತ್ತೊಮ್ಮೆ ಚಾಲನೆ ದೊರೆತಿದೆ. ಗುಲ್ಬರ್ಗ ನಗರದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ರಾಜ್ಯ ಸಂಪುಟ ದರ್ಜೆಯ ಮೂವರು ಸಚಿವರು ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಎನ್. ಕೆ. ಜೈನ್ ಅವರನ್ನು ಒತ್ತಾಯಿಸಿದ್ದಾರೆ.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಖಾತೆ ಸಚಿವ ಧರಮ್ ಸಿಂಗ್ ಹಾಗೂ ವಸತಿ ಸಚಿವ ಖಮರುಲ್ ಇಸ್ಲಾಂ ಅವರು, ಗುಲ್ಬರ್ಗ ನ್ಯಾಯಾಲಯ ಸಂಕೀರ್ಣ ಕಟ್ಟಡಗಳ ಉದ್ಘಾಟನೆ ಸಂದರ್ಭದಲ್ಲಿ ಈ ಬೇಡಿಕೆಯನ್ನು ಮುಖ್ಯನ್ಯಾಯಮೂರ್ತಿಗಳ ಮುಂದಿಟ್ಟಿದ್ದಾರೆ.
ಗುಲ್ಬರ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕೆಂಬ ಆಗ್ರಹ ಇಂದು ನಿನ್ನೆಯದಲ್ಲ. ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಿದರೆ ನಮ್ಮ ತಕರಾರೇನಿಲ್ಲ. ಆದರೆ ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಈ ಪೀಠದ ವ್ಯಾಪ್ತಿಯಡಿಗೆ ತರಬಾರದು ಎಂದು ಖರ್ಗೆ ಮನವಿ ಮಾಡಿಕೊಂಡರು.
ಸಚಿವ ಧರಮ್ ಸಿಂಗ್ ಮಾತನಾಡಿ, ನ್ಯಾಯಾಂಗ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಗುಲ್ಬರ್ಗದಲ್ಲಿಯೇ ಪೀಠ ಸ್ಥಾಪಿಸುವುದು ಒಳ್ಳೆಯದು. ಜಸ್ವಂತ್ ಸಮಿತಿ ಕೂಡ ತನ್ನ ವರದಿಯಲ್ಲಿ ಗುಲ್ಬರ್ಗದಲ್ಲಿ ಪೀಠ ಸ್ಥಾಪಿಸುವಂತೆ ಪ್ರಸ್ತಾಪ ಮಾಡಿತ್ತು ಎಂದರು. ವಸತಿ ಸಚಿವ ಖಮರುಲ್ ಇಸ್ಲಾಂ ಕೂಡ ಧರಮ್ ಸಿಂಗ್ ಮಾತುಗಳನ್ನು ಬೆಂಬಲಿಸಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತಂತೆ ಸಮಿತಿಯಾಂದನ್ನು ರಚಿಸಿದ್ದು, ಅದರ ಶಿಫಾರಸುಗಳನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್. ಕೆ. ಜೈನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications