ಕ್ರಿಕೆಟ್ ನಾಯಕನಾಗಿ ಗಂಗೂಲಿ ಆಯ್ಕೆ ದಾಲ್ಮಿಯಾ ಲಾಬಿ : ಡುಂಗಾರ್ಪುರ್
ಇಂದೋರ್ : ಸತತ ಕಳಪೆ ಆಟದ ಹೊರತಾಗಿಯೂ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಬಿಸಿಸಿಐ ಅಧ್ಯಕ್ಷ ಜಗನ್ಮೋಹನ ದಾಲ್ಮಿಯಾ ಕೃಪಾ ಕಟಾಕ್ಷದಿಂದ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ರಾಜ್ಸಿಂಗ್ ಡುಂಗಾರ್ಪುರ್ ಶುಕ್ರವಾರ ನೇರವಾಗಿ ಆರೋಪಿಸಿದ್ದಾರೆ.
ಕ್ರಿಕೆಟ್ ಮಂಡಳಿಯನ್ನು ದಾಲ್ಮಿಯಾ ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಳ್ಳುತ್ತಿದ್ದು, ಅಧಿಕಾರವನ್ನು ಆಯ್ಕೆ ಸಮಿತಿಯಲ್ಲಿ ಮೂಗು ತೂರಿಸಲು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಣದಲ್ಲಿ ಗಂಗೂಲಿ ಸಂಪೂರ್ಣ ವಿಫಲರಾಗಿದ್ದಾರೆ. ಒಳ್ಳೆಯ ನಾಯಕರಾಗಲೂ ನಾಲಾಯಕ್ಕು ಎಂಬುದು ಗೊತ್ತಾಗಿದೆ. ಹೀಗಿದ್ದೂ ಅವರನ್ನು ತಂಡದ ನಾಯಕರಾಗಿ ಆರಿಸಿರುವುದು ಆಶ್ಚರ್ಯಕರ. ನನಗೇನಾದರೂ ನಾಯಕನನ್ನು ಆರಿಸುವ ಅಧಿಕಾರ ಇದ್ದಿದ್ದರೆ ಸಚಿನ್ ತೆಂಡೂಲ್ಕರ್ನ ಆರಿಸುತ್ತಿದ್ದೆ. 2003ರ ವಿಶ್ವ ಕಪ್ಗೆ ಬಲಾಢ್ಯ ತಂಡ ಆರಿಸಲು ಅವರ ಸಲಹೆ ಪಡೆಯುತ್ತಿದ್ದೆ ಎಂದು ಡುಂಗಾರ್ಪುರ್ ಮುಕ್ತವಾಗಿ ಹೇಳಿದರು.
ಯಾರೂ ನಾಯಕತ್ವದ ಜವಾಬ್ದಾರಿ ಹೊರಲು ಸಿದ್ಧರಿಲ್ಲ ಅನ್ನುವುದು ನಗೆಪಾಟಲು ವಿಷಯವಾಗುತ್ತದೆ. ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥರು ಅರ್ಹ ಕ್ರಿಕೆಟಿಗನಿಗೆ ನಾಯಕತ್ವದ ಹೊಣೆ ಹೊರಿಸಬೇಕು. ಆ ಅರ್ಹತೆ ಸಚಿನ್ಗೆ ಇದೆ ಎಂದರು.
ದೀಪ್ದಾಸ್ ಗುಪ್ತಾ ಗೋಲ ಕೀಪರ್ ! : ವೆಸ್ಟಿಂಡೀಸ್ ಪ್ರವಾಸಕ್ಕೆ ವಿಕೆಟ್ ಕೀಪರ್ ಆಗಿ ಅಜಯ್ ರಾತ್ರಾ ಅವರನ್ನು ಆಯ್ಕೆ ಸಮಿತಿ ಸೂಚಿಸಿತು. ತಂಡದ ಮೇನೇಜ್ಮೆಂಟ್ ದೀಪ್ದಾಸ್ ಗುಪ್ತಾ ಬೇಕು ಅಂದಿತು. ದೀಪ್ದಾಸ್ ಗುಪ್ತಾಗೆ ಮೊದಲು ಬ್ಯಾಟ್ ಮಾಡುವ ಅವಕಾಶ ಬೇರೆ. ಹಾಗೆ ನೋಡಿದರೆ ಗುಪ್ತಾ ಕೀಪರ್ ಅಲ್ಲ, ಗೋಲ್ ಕೀಪರ್! ನಡುವೆ ಆಯ್ಕೆ ರಾಜಕೀಯಕ್ಕೆ ಕನ್ನಡಿ ಹಿಡಿದಂತೆ ವಾಸಿಂ ಜಾಫರ್. ನಯನ್ ಮೊಂಗಿಯಾಗೆ ಕೊಕ್ ಕೊಡಲು ಏನು ಕಾರಣ ? ಸುಮ್ಮನೆ ಇಲ್ಲ ಸಲ್ಲದ ಸಮರ್ಥನೆಗಳನ್ನು ಮಂಡಳಿ ಹೇಳುವುದು ಸರಿಯಲ್ಲ. ಈ ಎಲ್ಲಾ ಗೊಂದಲಗಳಿಗೆ ಬಿಸಿಸಿಐ ಅಧ್ಯಕ್ಷ ಅಥವಾ ಕಾರ್ಯದರ್ಶಿ ಸೂಕ್ತ ಉತ್ತರ ಕೊಡಬೇಕು ಎಂದು ಡುಂಗಾರ್ಪುರ್ ಆಗ್ರಹಿಸಿದರು.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...