ದೇವಸ್ಥಾನದ ಕಾಣಿಕೆ ಡಬ್ಬಿಗಳ ನಿರ್ವಹಣೆಗೆ ಹೊಸ ತಂತ್ರಾಂಶ ‘ಗಣತಿ’
ಬೆಂಗಳೂರು: ಉದ್ರಿ ಲೆಕ್ಕ ಇಡುವುದಕ್ಕೆ, ನೋಂದಣಿಗೆ... ಹೀಗೆ ಮನುಷ್ಯನ ಚಿಕ್ಕ ಪುಟ್ಟ ಅಗತ್ಯಗಳಿಗೆ ತಕ್ಕ ಹಾಗೆಯೇ ಬೆಳೆಯುತ್ತಾ ಹೋದ ತಂತ್ರಜ್ಞಾನ ಈಗ ದೇವರ ಗರ್ಭಗುಡಿಯತ್ತ ಕಾಲಿಟ್ಟಿದೆ. ಇದು ಮಾಹಿತಿ ತಂತ್ರಜ್ಞಾನದ ಮಹಾತ್ಮೆ. ಬೆಂಗಳೂರಿನ ತಂತ್ರಾಂಶ ಅಭಿವೃದ್ಧಿ ಕಾಯಕ ಹೊತ್ತ ಐಟಿ ಕಂಪೆನಿಯಾಂದು ಗಣತಿ ಎಂಬ ತಂತ್ರಾಂಶವನ್ನು ರೂಪಿಸಿದೆ. ಗಣತಿ ತಂತ್ರಾಂಶದಿಂದ ದೇವಸ್ಥಾನದ ಹುಂಡಿಯ ಕಾರ್ಯಗಳನ್ನು ನಿರ್ವಹಿಸುತ್ತದೆ.
ಹುಂಡಿಯಲ್ಲಿನ ಹಣ ಸಂಗ್ರಹಣೆ, ಲೆಕ್ಕಾಚಾರ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಈ ಗಣತಿ ಸಾಫ್ಟ್ವೇರ್ ಪರಿಶೀಲಿಸುತ್ತದೆ. ಧಾರ್ಮಿಕ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುವುದೇ ಈ ಸಾಫ್ಟ್ವೇರ್ ಪ್ಯಾಕೇಜ್ನ ಹಿಂದಿರುವ ಉದ್ದೇಶ ಎಂದು ಮೀಡಿಯಾ ಟೆಕ್ ಐ ಸೊಲ್ಯೂಷನ್ಸ್ನ ಇಂಜಿನಿಯರ್ಗಳು ಹೇಳುತ್ತಾರೆ.
ಈ ಸಾಫ್ಟ್ವೇರ್ನ್ನು ಪ್ರಥಮ ಬಾರಿಗೆ ಅಳವಡಿಸಿಕೊಂಡ ಅಗ್ಗಳಿಕೆ ಸಂಜಯನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಸಲ್ಲುತ್ತದೆ. ಪ್ರಾಯೋಗಿಕವಾಗಿ ಈ ಮಠದಲ್ಲಿಯೇ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಏಪ್ರಿಲ್ 6ರಂದು ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತ ಕುಮಾರ್ ಈ ತಂತ್ರಾಂಶದ ಔಪಚಾರಿಕ ಉದ್ಘಾಟನೆ ಮಾಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...