ಮರಳಿ ಗದ್ದುಗೆಗೆ ! ಮಾರ್ಚ್ 2 ರಂದು ಜಯಲಲಿತಾ ಸಿಂಹಾಸನಾರೋಹಣ
ಚೆನ್ನೈ: ಅಣ್ಣಾ ಡಿಎಂಕೆ ಸರ್ವೋಚ್ಛ ನಾಯಕಿ ಜೆ.ಜಯಲಲಿತಾ ಅವರ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ಮಾರ್ಚ್ 2 ರಂದು ಅಸ್ತಿತ್ವಕ್ಕೆ ಬರಲಿದೆ. ಇದರೊಂದಿಗೆ ಐದು ತಿಂಗಳ ಅಂತರದ ನಂತರ ಜಯಲಲಿತಾ ಮತ್ತೆ ಮುಖ್ಯಮಂತ್ರಿ ಗಾದಿಗೇರುತ್ತಿದ್ದಾರೆ.
ಆದಷ್ಟು ಬೇಗ ಸಚಿವ ಸಂಪುಟವನ್ನು ರಚಿಸುವಂತೆ ತಮಿಳನಾಡು ರಾಜ್ಯಪಾಲ ಪಿ.ಎಸ್.ರಾಜಮೋಹನ್ ಅವರು ಜಯಲಲಿತಾ ಅವರಿಗೆ ಸೋಮವಾರ ಆಹ್ವಾನ ನೀಡಿದ್ದು , ನೂತನ ಸಚಿವರ ಹಾಗೂ ಅವರ ಖಾತೆಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಜಯಲಲಿತಾ ಅವರಿಗೆ ತಿಳಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
1991 ರಲ್ಲಿ ಮೊಟ್ಟ ಮೊದಲ ಬಾರಿಗೆ ತಮಿಳನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ದಿನಗಳಲ್ಲಿ , ಜಯಲಲಿತಾ ತಮಿಳುನಾಡು ರಾಜಕಾರಣದ ಪ್ರಬಲ ಶಕ್ತಿಯಾಗಿ ಬೆಳೆದಿದ್ದಾರೆ. ತಾನ್ಸಿ ಭೂಹಗರಣದ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಯಲಲಿತಾ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು . ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜಯಲಲಿತಾ, ಸುಪ್ರಿಂಕೋರ್ಟ್ ಆಕ್ಷೇಪದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಾಗಿ ಪರಿಣಮಿಸಿದ್ದ ಹಗರಣಗಳಿಂದ ಮುಕ್ತಿಯಾದ ನಂತರ, ಜಯಲಲಿತಾ ಅವರು ಸ್ಪರ್ಧಿಸಲು ಅನುಕೂಲವಾಗುವಂತೆ ಆಂಡಿಪಟ್ಟಿ ಕ್ಷೇತ್ರವನ್ನು ತಂಗ ತಮಿಳು ಸೆಲ್ವನ್ ತೆರವು ಮಾಡಿದ್ದರು. ಇದರಿಂದಾಗಿ ನಡೆದ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಲಲಿತಾ ವಿಜಯಿಯಾಗಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...