‘ಕೃಷ್ಣ ಕನ್ನಡದ ವಾಸ್ಕೋಡಗಾಮ, ಶೋಕಿ ಅಭಿಮಾನಿಗಳ ಕನ್ನಡ ಡ್ರಾಮ’
ಬೆಂಗಳೂರು : ಮುಖ್ಯಮಂತ್ರಿಗಳ ಜ್ಞಾನ ಅಗಾಧ. ವಿಚಾರ ಅಪಾರ. ಅವರು ವಿದೇಶೀ ಹಿತೈಷಿಗಳ ಸ್ನೇಹಿತರು. ಸೌಮ್ಯ ಸ್ವಭಾವ ಅವರದು. ಪರಿಪೂರ್ಣ ವ್ಯಕ್ತಿಯಾದ ಮುಖ್ಯಮಂತ್ರಿಗಳು ‘ಕನ್ನಡದ ವಾಸ್ಕೋಡಗಾಮ’. ಅವರ ಪೂರ್ವಾಪರ ತಿಳಿಯದೆ ಟೀಕಿಸುವುದೇ ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಅದು ನಿಲ್ಲಬೇಕು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಮಾತಿದು. ಸಂದರ್ಭ- ಗುರುವಾರದ ಅಂತರರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ. ತಮ್ಮ ಅಧ್ಯಕ್ಷ ಭಾಷಣದಲ್ಲಿ ಮುಖ್ಯಮಂತ್ರಿಗಳನ್ನು ವಾಚಾಮಗೋಚರ ಹೊಗಳಿದ ವಿಶ್ವನಾಥ್, ಇಂಗ್ಲಿಷ್ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿ, ಕನ್ನಡ ಮಾಧ್ಯಮದಲ್ಲೇ ಪಾಠ ಹೇಳಬೇಕು ಎಂದು ಒತ್ತಾಯಿಸುವವರನ್ನು ಟೀಕಿಸಿದರು.
ಇತ್ತೀಚೆಗೆ ನಡೆದ ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂಗ್ಲಿಷ್ ಶಾಲೆಗಳದ್ದೇ ಮಾತು. 50 ಸಾವಿರ ಕನ್ನಡ ಶಾಲೆಗಳಿವೆ. ಅವುಗಳ ಬಗ್ಗೆ ಯಾವ ಮಾತೂ ಇಲ್ಲ. ಕೆಲವರಿಗೆ ಬೈಯುವುದೇ ಅಭ್ಯಾಸವಾಗಿಹೋಗಿದೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸಿ, ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಬೇಕು ಅಂತ ಧರಣಿ ಕೂರುವ ಶೋಕಿ ಅಭಿಮಾನಿಗಳೇನೂ ಕಡಿಮೆಯಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿಕೆ ಎಂಬ ಬಗೆಗಿನ ಬೈಗುಳವೇ ಚರ್ವಿತ ಚರ್ವಣವಾಗಿಬಿಟ್ಟಿದೆ ಎಂದರು.
ಸುಮ್ಮನಿದ್ದರೆ ಅದೇ ದೊಡ್ಡ ಸೇವೆ : ಸಮಾರಂಭವನ್ನು ಉದ್ಘಾಟಿಸಿ ಮಾತಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕನ್ನಡದ ಮಹತ್ವ ಒತ್ತಿ ಹೇಳುವ ಪ್ರಯತ್ನ ನಡೆಯುತ್ತಿದೆ. ಮಾತೃಭಾಷೆ ಮುಖ್ಯವಾಹಿನಿ. ವಸ್ತುಸ್ಥಿತಿ ಹೀಗಿರುವಾಗ, ಮತ್ತೊಂದು ಭಾಷೆ ಬಗ್ಗೆ ಗೊಂದಲ ಹುಟ್ಟುಹಾಕುವುದು ಸಲ್ಲ. ಪ್ರಚಾರಕ್ಕಾಗಿ ಸುಮ್ಮನೆ ಟೀಕಿಸುವುದನ್ನು ನಿಲ್ಲಿಸಿದರೆ ಅದೇ ಕನ್ನಡಕ್ಕೆ ಮಾಡುವ ದೊಡ್ಡಸೇವೆ ಎಂದು ಮಾರ್ಮಿಕವಾಗಿ ನುಡಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications