ಹೈದರಾಬಾದ್ ಕರ್ನಾಟಕವೆಂಬ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ವಿರೋಧ
ಗುಲ್ಬರ್ಗಾ : ಗುಲ್ಬರ್ಗಾ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅಖಿಲ ಭಾರತ ಯುವಜನ ಒಕ್ಕೂಟ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದೆ, ಈ ಪ್ರದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ಪ್ರತ್ಯೇಕ ರಾಜ್ಯ ಸ್ಥಾಪನೆ ಹೋರಾಟ ಅನಿವಾರ್ಯ ಎಂದು ಸಾರುತ್ತಿರುವ ನಾಯಕರು, ಹಿಂದೆ ತಾವು ಮಂತ್ರಿಗಳಾಗಿ ಅಧಿಕಾರಿದಲ್ಲಿದ್ದಾಗ ಈ ಭಾಗಕ್ಕೆ ಮಾಡಿದ ಉಪಕಾರವೇನು ಎಂದು ಪ್ರಶ್ನಿಸಿರುವ ಈ ಎರಡು ಸಂಘಟನೆಗಳು ಪ್ರತ್ಯೇಕತೆಯ ಕೂಗಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅನ್ಯಾಯವಾಗಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ನಡೆಸೋಣ. ನಾವೂ ಅದಕ್ಕೆ ಸಿದ್ಧರಾಗಿದ್ದೇವೆ. ಆದರೆ, ನಮಗೆ ಪ್ರತ್ಯೇಕ ರಾಜ್ಯ ಬೇಡ ಎಂದು ಎಐಎಸ್ಎಫ್ನ ಯಶವಂತ ಮತ್ತು ಎಐವೈಎಫ್ನ ನಾರಾಯಣ ಜೋಷಿ ಅವರು ನೀಡಿರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮ ಕೈಯಲ್ಲಿ ಅಧಿಕಾರವಿದ್ದಾಗ ತೆಪ್ಪಗಿದ್ದ ಜನನಾಯಕರು, ಇಂದು ಅಧಿಕಾರಕ್ಕಾಗಿ ಪ್ರತ್ಯೇಕ ರಾಜ್ಯದ ಹೋರಾಟ ನಡೆಸುತ್ತಿದ್ದಾರೆ. ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ವಿನಾ ಕಾರಣ ಈ ಭಾಗದ ಜನಮನದಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...