16ರಲ್ಲಿ ಕಥಕ್ರಾಣಿ ಬಿರುದು ಪಡೆದ ಸಾಧಕಿಗೆ 80ರಲ್ಲಿ ಪದ್ಮಭೂಷಣವೇ ?
ಮುಂಬಯಿ: ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರಖ್ಯಾತ ಕಥಕ್ ನೃತ್ಯ ಕಲಾವಿದೆ ಸಿತಾರಾ ದೇವಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಕಥಕ್ ನೃತ್ಯ ಪ್ರಕಾರದಲ್ಲಿ ಅಂತರರಾಷ್ಟ್ರೀಯ ಪ್ರಸಿದ್ಧಿ ಗಳಿಸಿರುವ 80ರ ಹರೆಯದ ಸಿತಾರಾ ದೇವಿ ತಮಗೆ ಈ ವಯಸ್ಸಿನಲ್ಲಿ ಪದ್ಮಭೂಷಣ ನೀಡಿ ಅವಮಾನ ಮಾಡಲಾಗುತ್ತಿದೆ. ಇದು ಸನ್ಮಾನ ಅಲ್ಲ ಎಂದು ವ್ಯಗ್ರರಾಗಿ ಹೇಳಿದ್ದಾರೆ. ತಮ್ಮ ಏಳನೆಯ ವಯಸ್ಸಿನಲ್ಲಿಯೇ ಕಥಕ್ ನೃತ್ಯಾಭ್ಯಾಸಕ್ಕೆ ತೊಡಗಿದ ಸಿತಾರಾ ಅವರು 16ನೇ ವಯಸ್ಸಿನಲ್ಲಿ ಗುರುದೇವ ರವೀಂದ್ರನಾಥ್ ಠಾಗೋರರಿಂದ ‘ಕಥಕ್ರಾಣಿ’ ಬಿರುದು ಪಡೆದಿದ್ದರು.
‘ನನಗಿಂತ ಎಷ್ಟೋ ಚಿಕ್ಕವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ಆದರೆ ಈ ವಯಸ್ಸಿನಲ್ಲಿ ನನಗೆ ಪದ್ಮಭೂಷಣ ಪ್ರಶಸ್ತಿ ನೀಡುತ್ತಿದ್ದಾರೆ. ಭಾರತ ರತ್ನಕ್ಕಿಂತ ಕಡಿಮೆ ಮೌಲ್ಯದ ಯಾವುದೇ ಪ್ರಶಸ್ತಿಯನ್ನು ನಾನು ಸ್ವೀಕರಿಸಲಾರೆ. ನೊಬೆಲ್ ಪ್ರಶಸ್ತಿ ವಿಜೇತರಿಂದ ಬೆನ್ನು ತಟ್ಟಿಸಿಕೊಂಡಿದ್ದೇ ನನ್ನ ಜೀವನದಲ್ಲಿ ನನಗೆ ದೊರೆತ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ’ ಎಂದು ಸಿತಾರಾ ದೇವಿ ಹೇಳಿದ್ದಾರೆ.
ಪ್ರಶಸ್ತಿಗಳ ಬಗ್ಗೆ ನೀವೇನು ಹೇಳುತ್ತೀರಿ ?
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...