ರಾಜ್ಯದ ವಿದ್ಯುತ್ ಕ್ಷಾಮ ಎದುರಿಸಲು ರಾಜ್ಯದ ಹೊಸ ಕ್ರಮ: ಕೃಷ್ಣ
ಚನ್ನಪಟ್ಟಣ : ಮುಂಗಾರು ಮಳೆಯ ವೈಫಲ್ಯದಿಂದ ಭೀಕರ ಬರಗಾಲ ಎದುರಿಸಿದ ರಾಜ್ಯ ಈ ಹೊತ್ತು ತೀವ್ರ ವಿದ್ಯುತ್ ಬರ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಸಾವಿರ ಮೆಗಾ ವ್ಯಾಟ್ಗೂ ಹೆಚ್ಚು ವಿದ್ಯುತ್ ಉತ್ಪಾದಿಸುವ ವಿವಿಧ ಯೋಜನೆಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಮುಂದಿನ ತಿಂಗಳು 500 ಮೆಗಾ ವ್ಯಾಟ್ ಉತ್ಪಾದನೆ ಸಾಮರ್ಥ್ಯದ ಕೇಂದ್ರದ ಕಾಮಗಾರಿಯನ್ನು ಬಳ್ಳಾರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಜಿಂದಾಲ್ನಲ್ಲಿ ಕೂಡ ಹೆಚ್ಚುವರಿಯಾಗಿ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದೆ ಎಂದರು.
ಪ್ರತಿಷ್ಠಿತ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೃಷ್ಣ ಅವರು, ಆಲಮಟ್ಟಿ ಅಣೆಯ ಬಳಿ 290 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ತುರ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ವಿದ್ಯುತ್ ಕೊರತೆ ಸರಿದೂಗಿಸುವ ಸಲುವಾಗಿ ಒರಿಸ್ಸಾದಿಂದ 100 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಮಹಾರಾಷ್ಟ್ರದ ಟಾಟಾ ಸಂಸ್ಥೆಯಿಂದಲೂ ವಿದ್ಯುತ್ ಖರೀದಿಸಲು ಸರಕಾರ ಪ್ರಯತ್ನ ಮುಂದುವರಿಸಿದೆ. ಆದರೆ, ವಿದ್ಯುತ್ ಸೋರಿಕೆ ಬಹಳವಾಗಿದೆ ಎಂದರು.
ಈ ಹೊತ್ತು ಶೇ.38ರಷ್ಟು ವಿದ್ಯುತ್ ಸೋರಿಕೆ ಆಗುತ್ತಿದೆ. ಇದನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು. ವಾಸ್ತವವಾಗಿ ವಿದ್ಯುತ್ ಜಾಲದಲ್ಲಿನ ಸೋರಿಕೆಯಿಂದ 100 ಕೋಟಿ ವಿದ್ಯುತ್ ಖರೀದಿಸಿದರೆ ನಾವು ಪಡೆಯುವುದು ಕೇವಲ 70 ಕೋಟಿ ರು. ವಿದ್ಯುತ್ ಮಾತ್ರ ಎಂದೂ ಅವರು ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಹಕಾರ ಸಚಿವ ಹಾಗೂ ಸಂಭವನೀಯ ಕನಕಪುರ ಕ್ಷೇತ್ರದ ಹುರಿಯಾಳು ಡಿ.ಕೆ. ಶಿವಕುಮಾರ್, ಹಿರಿಯ ಸಚಿವರಾದ ಎಚ್.ಸಿ. ಶ್ರೀಕಂಠಯ್ಯ, ಕೆ.ಎಚ್. ರಂಗನಾಥ್, ಎಚ್.ಎಂ. ರೇವಣ್ಣ, ನಟ ಹಾಗೂ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೀಶ್ವರ್, ಸಿ.ಎಂ. ಲಿಂಗಪ್ಪ ಮೊದಲಾದವರು ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications