ಕನಕಪುರ ಲೋಕಸಭೆ ಚುನಾವಣೆ : ಬಿಜೆಪಿಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ
ಬೆಂಗಳೂರು : ಮುಂದಿನ ತಿಂಗಳು ನಡೆಯಲಿರುವ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಸವಾಲಾಗಿದೆ. ಆ ಕ್ಷೇತ್ರವನ್ನು ಮತ್ತೆ ಗೆಲ್ಲಬೇಕೆಂಬ ಛಲ ಕಾಂಗ್ರೆಸ್ದಾದರೆ, ಕನಕಪುರ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಲು ದಳ ಬಣಗಳು ಕಸರತ್ತು ನಡೆಸಿವೆ.
ದಳ ಬಣಗಳೆರಡೂ ಮಗದೊಮ್ಮೆ ಒಂದಾಗಿ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಆದರೂ, ಜಾತ್ಯತೀತ ಜನತಾದಳದ ದೇವೇಗೌಡರನ್ನೂ, ಸಂಯುಕ್ತ ದಳದಿಂದ ಪಿ.ಜಿ.ಆರ್. ಸಿಂಧ್ಯ ಅವರನ್ನೂ ತಮ್ಮ ಪಕ್ಷದ ಅಭ್ಯರ್ಥಿಗಳೆಂದು ಘೋಷಿಸಿವೆ. ಈ ಮಧ್ಯೆ ದೇವಗೌಡರನ್ನು ಸರ್ವಸಮ್ಮತ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲೂ ತಾನು ತಯಾರಿರುವುದಾಗಿ ಸಂಯುಕ್ತ ಜನತಾದಳ ಸೂಚ್ಯವಾಗಿ ತಿಳಿಸಿದೆ. ಇದರಿಂದಾಗಿ ಎರಡೂ ಬಣಗಳ ಸರ್ವಸಮ್ಮತ ಅಭ್ಯರ್ಥಿಯಾಗಿ ಗೌಡರು ಆಯ್ಕೆಯಾಗುವ ಸಾಧ್ಯತೆಗಳಿವೆ.
ಈ ನಡುವೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ದೇವೇಗೌಡರ ವಿರುದ್ಧ ಬಹಿರಂಗವಾಗಿ ಸಮರಸಾರಿರುವ ರಾಜ್ಯ ಸಹಕಾರ ಸಚಿವ ಡಿ.ಕೆ. ಶಿವಕುಮಾರ್ರನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸುತ್ತಿದ್ದರೆ, ಭಾರತೀಯ ಜನತಾಪಕ್ಷವು ಹಾಲಿ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ಅನುಮೋದನೆಗಾಗಿ ಹೈಕಮಾಂಡ್ಗೆ ಶಿಫಾರಸು ಮಾಡಿದೆ.
ತಮ್ಮ ಪಕ್ಷದಿಂದ ಏಕಮೇವ ಅಭ್ಯರ್ಥಿಯಾಗಿ ಈಶ್ವರಪ್ಪ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ. ತಾವು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಶ್ವರಪ್ಪ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಎಂ.ವಿ. ಚಂದ್ರಶೇಖರ ಮೂರ್ತಿ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿದೆ.
(ಪಿಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...