ಬಿಇಎಲ್ನಲ್ಲಿ ಸದ್ದಿಲ್ಲದ ಕ್ರಾಂತಿ : ಕನ್ನಡ ಬಲ್ಲವರಿಗೆ ಮಾತ್ರ ಉದ್ಯೋಗ
ಬೆಂಗಳೂರು : ಹೆಸರಾಂತ ಸಾರ್ವಜನಿಕ ವಲಯದ ಉದ್ದಿಮೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸದ್ದಿಲ್ಲದ ಕನ್ನಡ ಕ್ರಾಂತಿಗೆ ಸಮ್ಮತಿಸಿದೆ. ಇನ್ನು ಮುಂದೆ ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಮಾತ್ರ ಉದ್ಯೋಗ ನೀಡುವುದಾಗಿ ಸ್ಪಷ್ಟಪಡಿಸಿದೆ.
ಈ ವಿಷಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ. ಬಿಇಎಲ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಕೆ. ಕೋಶಿ ಅವರೊಂದಿಗೆ ತಾವು ನಡೆಸಿದ ಮಾತುಕತೆ ಫಲಪ್ರದವಾಗಿದೆ. ‘ಕನ್ನಡಿಗರಿಗೆ ಉದ್ಯೋಗ’ ಎಂಬ ನೀತಿಗೆ ಬಿಇಎಲ್ನ ಈ ನಿರ್ಧಾರ ಬಲನೀಡಿದೆ ಎಂದು ಅವರು ಹೇಳಿದ್ದಾರೆ.
ಇದರಿಂದಾಗಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಉದ್ದಿಮೆಯಾಂದು ಪೂರಕ ಬೆಂಬಲ ನೀಡಿದಂತಾಗಿದೆ. ಬಿಇಎಲ್ನ ಈ ಪ್ರೋತ್ಸಾಹದ ಫಲವಾಗಿ ತಮ್ಮ ಉತ್ಸಾಹ ಇಮ್ಮುಡಿಯಾಗಿದೆ ಎಂದು ಅವರು ಹೇಳಿದರು.
ಇದೇ ರೀತಿ ರಾಜ್ಯ ಹಾಗೂ ಕೇಂದ್ರ ಸರಕಾರಿ ಒಡೆತನದ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ, ಎಲ್ಲ ಕಡೆಗಳಲ್ಲೂ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಲು ತಾವು ಶಕ್ತಿಮೀರಿ ಶ್ರಮಿಸುವುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಬಂದು ನೆಲೆಸುವವರು ಕಡ್ಡಾಯವಾಗಿ ಕನ್ನಡ ಓದಲು ಬರೆಯಲು ಕಲಿಯಬೇಕು.
ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಮಾತ್ರ ಉದ್ಯೋಗ ಎಂಬ ನೀತಿ ಎಲ್ಲೆಡೆ ಯಾವುದೇ ವಿವಾದವಿಲ್ಲದೆ ಅನುಷ್ಠಾನಕ್ಕೆ ಬರಬೇಕು ಎಂದು ಬರಗೂರು ಪ್ರತಿಪಾದಿಸಿದರು. ವಿಶ್ವಾದ್ಯಂತ ಕನ್ನಡ ತಂತ್ರಾಂಶ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಹಾಗೂ ಏಕರೂಪ ತಂತ್ರಾಂಶ ರೂಪಿಸುವ ಹಾದಿಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದೂ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...