ಪೊಲೀಸ್ ಬಿಗಿ ಕಾವಲಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಚಾಲನೆ
ಚಿಕ್ಕಮಗಳೂರು: ಭಾವೈಕ್ಯದ ಸಂಕೇತ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾಗಿರುವ ಗುರು ದತ್ತಾತ್ರೇಯ ಪೀಠದಲ್ಲಿ ಭದ್ರತಾ ಪಡೆಗಳ ಬಿಗಿ ಕಾವಲಿನಲ್ಲಿ ಡಿಸೆಂಬರ್ 28ರ ಶುಕ್ರವಾರದಿಂದ ದತ್ತಜಯಂತಿ ಶಾಂತಿಯುತವಾಗಿ ಪ್ರಾರಂಭಗೊಂಡಿದೆ. ಭಾವೈಕ್ಯದ ಕಿಂಡಿಯನ್ನು ತೆರೆದು ದತ್ತ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದತ್ತಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ.
ಭಾವೈಕ್ಯತೆಗೆ ಹೆಸರಾಗಿದ್ದ ಬಾಬಾಬುಡನ್ಗಿರಿ ಈ ಹೊತ್ತು ಪೊಲೀಸ್ ಹಾಗೂ ಭದ್ರತಾಪಡೆಯ ಸಿಬ್ಬಂದಿಯಿಂದ ತುಂಬಿ ಹೋಗಿದೆ. ಕಳೆದ ವರ್ಷ ಕೂಡ ಶಾಂತಿಯುತವಾಗಿ ದತ್ತ ಜಯಂತಿ ಆಚರಿಸುವ ನಿಟ್ಟಿನಲ್ಲಿ ಆರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಬಾರಿ ಖಾಕಿವಸ್ತ್ರಧಾರಿ ಪೊಲೀಸರ ಜೊತೆಗೆ ನೀಲಿ ವರ್ಣದ ಮಿಲಿಟರಿ ಬಟ್ಟೆ ತೊಟ್ಟ ಕ್ಷಿಪ್ರ ಕಾರ್ಯಾಚರಣೆ ಪಡೆ ಪೊಲೀಸರು ಗಿರಿಗೆ ಆಗಮಿಸಿದ್ದಾರೆ.
ಪೊಲೀಸರೇ ಹೆಚ್ಚಾಗಿರುವ ಗಿರಿಯಲ್ಲಿ ಬೆರಳೆಣಿಕೆಯಷ್ಟು ಆಸ್ತಿಕರು ಶುಕ್ರವಾರ ಹೋಮ, ಹವನ ಹಾಗೂ ಇನ್ನಿತರ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡರು. ಗಿರಿಯಲ್ಲಿರುವ ಗೋರಿಗಳಿಗೆ ಹೊದಿಸಲಾಗಿದ್ದ ಹಸಿರು ವಸ್ತ್ರಗಳನ್ನು ತೆಗೆಸಲಾಗಿದ್ದು, ಗೋರಿಯ ಸುತ್ತಲೂ ತಂತಿ ಬೇಲಿಯನ್ನು ಹಾಕಲಾಗಿದೆ.
ಗೋರಿಗಳಿಗೆ ಯಾವುದೇ ರೀತಿಯ ಹಾನಿ ಆಗದಂತೆ ಕಾಪಾಡಲು ಗೋರಿಗಳ ಸುತ್ತಲೂ ಪೊಲೀಸ್ ವೃತ್ತ ನಿರ್ಮಿಸಲಾಗಿದೆ. ಕ್ಷೇತ್ರದ ಹೊರ ಆವರಣದಲ್ಲಿ ಕಟಕಟೆ ನಿರ್ಮಿಸಲಾಗಿದ್ದು, ಪೀಠಕ್ಕೆ ಬರುವ ಎಲ್ಲ ಯಾತ್ರಾರ್ಥಿಗಳನ್ನೂ ಕೂಲಂಕಷವಾಗಿ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ. ಅತ್ತಿಗುಂಡಿ ಮೊದಲಾದ ಸೂಕ್ಷ್ಮ ಪ್ರದೇಶಗಳಂತೂ ಪೊಲೀಸ್ಮಯವಾಗಿ ಹೋಗಿವೆ.
ಪಶ್ಚಿಮ ವಲಯ ಐಜಿ ಧರ್ಮಪಾಲ್ ನೇಗಿ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ರಾಮಚಂದ್ರರಾವ್ ರಕ್ಷಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ದತ್ತ ಪೀಠದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಕೆ.ಎಚ್. ಗೋಪಾಲಕೃಷ್ಣ ಗೌಡ ಶುಕ್ರವಾರದ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡು, ಭದ್ರತೆಯ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಶನಿವಾರ ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications