ಡಿ.26ರಂದು ವೈಕುಂಠ ಏಕಾದಶಿ; ಬೆಂಗಳೂರಿನಲ್ಲಿ ಭರದ ಸಿದ್ಧತೆ
ಬೆಂಗಳೂರು : ಶೈವರಿಗೆ ಮಹಾಶಿವರಾತ್ರಿ ಇದ್ದಂತೆ, ವೈಷ್ಣವರಿಗೆ ವೈಕುಂಠ ಏಕಾದಶಿ. ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ಆ ದಿನ ಎಲ್ಲ ವಿಷ್ಣು ದೇವಾಲಯಗಳಲ್ಲಿ ತೆರೆಯುವ ಸ್ವರ್ಗದ ಬಾಗಿಲ ಮೂಲಕ ಹೊರಬಂದರೆ, ತಮ್ಮ ಜನ್ಮ ಸಾರ್ಥಕ ಎಂದು ಭಕ್ತರು ನಂಬಿದ್ದಾರೆ.
ಹೀಗಾಗೇ ವೈಕುಂಠ ಏಕಾದಶಿಯಂದು ಬೆಳಗ್ಗೆ 5 ಗಂಟೆಗೇ ಎದ್ದು, ಶುಚಿರ್ಭೂತರಾಗಿ, ಮಡಿ ಬಟ್ಟೆಯುಟ್ಟು ಭಕ್ತರು, ವೆಂಕಟರಮಣನ ದೇವಾಲಯಗಳಿಗೆ ತೆರಳುತ್ತಾರೆ. ರಾಜ್ಯದ ಚಿಕ್ಕ ತಿರುಪತಿ ಸೇರಿದಂತೆ ಎಲ್ಲ ವೆಂಕಟೇಶನ ದೇವಾಲಯಗಳಲ್ಲೂ ಬೆಳಗ್ಗಿನಿಂದ ಮಧ್ಯರಾತ್ರಿವರೆಗೆ ಜನ ಸರತಿಯ ಸಾಲಿನಲ್ಲಿ ನಿಂತು ಲಕ್ಷ್ಮೀಪತಿಯ ದರ್ಶನ ಮಾಡುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರನ್ನು ನಿಯಂತ್ರಿಸಲು ಈಹೊತ್ತು ಬೆಂಗಳೂರಿನ ಎಲ್ಲ ವಿಷ್ಣು ದೇವಾಲಯಗಳೂ ಭರದ ಸಿದ್ಧತೆ ನಡೆಸಿವೆ. ಬೆಂಗಳೂರಿನ ಕೋಟೆ ಪ್ರದೇಶದಲ್ಲಿರುವ ವೆಂಕಟರಮಣನದ ದೇವಾಲಯ ದ್ವಾರವನ್ನು ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಭಕ್ತಾಧಿಗಳು ಸರತಿಯ ಸಾಲಿನಲ್ಲಿ ಬರಲಿ ಎಂಬು ಕಾರಣದಿಂದ ಕಟೆಕಟೆ ನಿರ್ಮಿಸಲಾಗಿದೆ.
ಕಳೆದ ಕೆಲವು ದಿನದಿಂದ ಸಣ್ಣಗೆ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಭಕ್ತರನ್ನು ರಕ್ಷಿಸಲು ಬನಶಂಕರಿಯಲ್ಲಿರುವ ದೇವಗಿರಿ ದೇವಾಲಯದಲ್ಲಿ ರಸ್ತೆಯುದ್ಧಕ್ಕೂ ಶಾಮಿಯಾನ ಹಾಕಿ ಒಂದು ಮೈಲಿಯುದ್ಧದ ತಾತ್ಕಾಲಿಕ ಮರದ ಕಟಕಟೆ ನಿರ್ಮಿಸಲಾಗಿದೆ. ಶ್ರೀನಗರದಲ್ಲಿರುವ ವೆಂಕಟರಮಣನ ದೇವಾಲಯ ಪುಷ್ಪಾಲಂಕಾರ ಹಾಗೂ ವಿದ್ಯುದಾಲಂಕಾರದಿಂದ ಕಂಗೊಳಿಸುತ್ತಿದೆ.
ಸಾಂಸ್ಕೃತಿಕ ಕಾರ್ಯಕ್ರಮ : ಜೆ.ಪಿ. ನಗರದ 80 ಅಡಿ ರಸ್ತೆಯಲ್ಲಿರುವ ಶ್ರೀತಿರುಮಲ ಗಿರಿ ವೆಂಕಟೇಶ್ವರನ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರವಚನ ಏರ್ಪಡಿಸಲಾಗಿದೆ. ಗಿರಿನಗರದಲ್ಲಿರುವ ವೆಂಕಟೇಶನ ದೇವಾಲಯವೂ ವೈಕುಂಠ ಏಕಾದಶಿಗೆ ಸಕಲ ಸಜ್ಜಾಗಿದೆ. ರಾಜಾಜಿನಗರದಲ್ಲಿರುವ ವಿಶ್ವವಿಖ್ಯಾತ ಇಸ್ಕಾನ್ ದೇವಾಲಯದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಲಕ್ಷಾರ್ಚನೆ, ಭಜನೆ, ಕೀರ್ತನೆ ಹಾಗೂ ವಿಶೇಷ ದರ್ಶನ ಏರ್ಪಡಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...