ಯುದ್ಧ ಭೀತಿ : ಮಿಲಿಟರಿ ಸಿಬ್ಬಂದಿಗೆ ರಜೆ ಮೊಟಕುಗೊಳಿಸಿದ ಪಾಕ್
ಇಸ್ಲಮಾಬಾದ್ : ಭಾರತ ಹಾಗೂ ಪಾಕಿಸ್ತಾನಗಳ ಅಂತರರಾಷ್ಟ್ರೀಯ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೈನ್ಯ ಜಮಾವಣೆಯಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ತನ್ನೆಲ್ಲ ಸೈನಿಕ ಸಿಬ್ಬಂದಿಗೆ ನೀಡಿರುವ ರಜೆಯನ್ನು ಪಾಕಿಸ್ತಾನ ಆಡಳಿತ ರದ್ದು ಪಡಿಸಿದೆ. ರಾಜಸ್ತಾನ, ಸಿಂಧ್ ಹಾಗೂ ಕೇಂದ್ರ ಪಂಜಾಬ್ ಪ್ರಾಂತ.್ಯಗಳಲ್ಲಿ ಭಾರತದ ಸೇನಾ ಜಮಾವಣೆ ನಡೆಯುತ್ತಿರುವುದರಿಂದ ಆ ಪ್ರದೇಶಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಪಾಕ್ ಸೇನೆ ಗೆ ಆಡಳಿತದಿಂದ ಸೂಚನೆಗಳು ರವಾನೆಯಾಗಿವೆ.
ರಜೆಯಲ್ಲಿರುವ ಎಲ್ಲ ಮಿಲಿಟರಿ ಅಧಿಕಾರಿಗಳು ತಮ್ಮ ರಜೆಯನ್ನು ಮೊಟಕುಗೊಳಿಸಿ ಸೇವೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಗಡಿ ಪ್ರದೇಶಗಳ ರಕ್ಷಣಾ ವ್ಯವಸ್ಥೆಯನ್ನು ಮಿಲಿಟರಿ ಅಧಿಕಾರಿಗಳು ಅತಿ ಹತ್ತಿರದಿಂದ ಗಮನಿಸುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ ಎಂದು ಇಸ್ಲಮಾಬಾದ್ನಲ್ಲಿ ರಕ್ಷಣಾ ಅಧಿಕಾರಿಗಳ ಮೂಲಗಳನ್ನುಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಗಡಿ ಭಾಗದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಿಸಿ ಕಾಶ್ಮೀರಕ್ಕೂ ವ್ಯಾಪಿಸಿದ್ದು , ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಭಾರತದೊಂದಿಗೆ ಪಾಕಿಸ್ತಾನ ಕಳೆದ ವರ್ಷ ನಡೆಸಿದ್ದ ಮಾತುಕತೆಗಳ ಪರಿಣಾಮ ಗಡಿನಿಯಂತ್ರಣ ರೇಖೆಯಲ್ಲಿ ತನ್ನ ಪಡೆಗಳನ್ನು ಕಡಿಮೆಗೊಳಿಸಿದ್ದ ಪಾಕಿಸ್ತಾನ, ಪ್ರಸ್ತುತ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿದೆ. ಪ್ರತಿಯಾಗಿ ಭಾರತ ಕೂಡ ತನ್ನ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿದೆ ಎಂದು ಡಾನ್ ವರದಿ ತಿಳಿಸಿದೆ.
ಅತ್ತ ದರಿ ಇತ್ತ ಹುಲಿ
1979 ರಲ್ಲಿ ಆಪ್ಘಾನಿಸ್ತಾನದ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ತನ್ನ ಎರಡು ಅಂತರರಾಷ್ಟ್ರೀಯ ಗಡಿಗಳಲ್ಲಿ ಆತಂಕ ಎದುರಿಸುತ್ತಿದೆ. ಆಪ್ಘನ್ನ ಡುರಾಂಡ್ ಗಡಿರೇಖೆಯಲ್ಲಿ ಹೆಚ್ಚಿನ ಪಡೆಗಳನ್ನು ಪಾಕ್ ನಿಯೋಜಿಸಿದ್ದು, ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್ ಲ್ಯಾಡೆನ್ ಹಾಗೂ ಅಲ್ ಖ್ವೆ ೖದಾ ಸಂಘಟನೆಯ ಉಗ್ರರು ದೇಶದೊಳಗೆ ನುಸುಳದಂತೆ ಜಾಗ್ರತೆ ವಹಿಸಿದೆ. ಇದೇ ಸಂದರ್ಭದಲ್ಲಿ ಭಾರತದ ಗಡಿ ಪ್ರದೇಶಗಳಿಗೂ ಹೆಚ್ಚಿನ ಗಮನ ನೀಡಬೇಕಾದ ಸಂದರ್ಭ ಪಾಕ್ಗೆ ಎದುರಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...