ವಿಶ್ವಕಪ್ವರೆಗೆ ಜಾನ್ರೈಟ್ಗೆ ಜೀವದಾನ, ಕ್ರಿಕೆಟ್ ಮಂಡಳಿ ತೀರ್ಮಾನ
ಶ್ರೀನಗರ : ಭಾರತ ಕ್ರಿಕೆಟ್ ತಂಡದ ತರಬೇತುದಾರ ಜಾನ್ ರೈಟ್ ಹಾಗೂ ಫಿಸಿಯೋಥೆರಪಿಸ್ಟ್ ಆ್ಯಂಡ್ರೂ ಲೈಪಸ್ ಅವರನ್ನು 2003ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿಯುವವರೆಗೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ವಿಷಯವನ್ನು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಇಲ್ಲಿ ತಿಳಿಸಿದ್ದಾರೆ.
ಮಹತ್ವದ ತೀರ್ಮಾನದಿಂದಾಗಿ ಜಾನ್ ರೈಟ್ ಹಾಗೂ ಲೈಪಸ್ ಅವರ ಸ್ಥಾನಕ್ಕೆ ಹೊಸಬರನ್ನು ತರಲಾಗುತ್ತದೆ ಎಂಬ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ. ಈ ಇಬ್ಬರೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು 2003ರಲ್ಲಿ ಸೌತ್ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಮುಗಿಯುವವರೆಗೆ ವಿಸ್ತರಿಸಿರುವುದಾಗಿ ದಾಲ್ಮಿಯಾ ಹೇಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಕ್ರಿಕೆಟ್ ಸರಣಿಯ ಬಳಿಕ ಜಾನ್ರೈಟ್ ಹಾಗೂ ಲೈಪಸ್ ಅವರನ್ನು ಬದಲಾಯಿಸಲಾಗುತ್ತದೆ ಎಂಬ ದಟ್ಟ ವದಂತಿಗಳು ಕಳೆದ ಕೆಲವು ವಾರಗಳಿಂದಲೂ ಕ್ರಿಕೆಟ್ ವಲಯದಲ್ಲಿ ಸುಳಿದಾಡುತ್ತಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ತೆಂಡೂಲ್ಕರ್ ಇಲ್ಲ: ಜನವರಿಯಲ್ಲಿ ನಡೆಯಲಿರುವ ಚಾಲೆಂಜರ್ ಟ್ರೋಫಿ ಏಕದಿನ ಪಂದ್ಯಗಳ ಸರಣಿಯಲ್ಲಿ ಲಿಟ್ಲ್ ಮಾಸ್ಟರ್ ತೆಂಡೂಲ್ಕರ್ ಹಾಗೂ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಆಡುತ್ತಿಲ್ಲ. ಭಾರತದ ಹಿರಿಯರ ತಂಡ ಹಾಗೂ ಭಾರತ ಎ ಮತ್ತು ಬಿ ತಂಡಗಳ ನಡುವೆ ಈ ಪಂದ್ಯಾವಳಿ ನಡೆಯುತ್ತಿದೆ.
ಈ ಪಂದ್ಯಾವಳಿಯ ಒಂದೇ ಒಂದು ಪಂದ್ಯದಲ್ಲಿ ಮಾತ್ರ ತಾವು ಆಡುವುದಾಗಿ ಈಗಾಗಲೇ ಭಾರತ ತಂಡದ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಆದಾಗ್ಯೂ ಬೆಂಗಳೂರಿನಲ್ಲಿ ಭಾನುವಾರ ಸಭೆ ಸೇರಿದ್ದ ಆಯ್ಕೆದಾರರು ಪಂದ್ಯಾವಳಿಗೆ ಮೂರು ತಂಡಗಳನ್ನು ಆರಿಸಿದ್ದಾರೆ. ಗಂಗೂಲಿ ಅವರನ್ನು ಹಿರಿಯರ ತಂಡದ ನಾಯಕರೆಂದು ಘೋಷಿಸಿದ್ದಾರೆ.
ಈ ವಿಷಯವನ್ನು ಚಂದು ಬೋರ್ಡೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಸೌರವ್ ಪಾಲ್ಗೊಳ್ಳದ ಪಂದ್ಯಗಳ ನಾಯಕತ್ವವನ್ನು ಹಿರಿಯ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ನಿರ್ವಹಿಸುವರು ಎಂದೂ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...