ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಬಿರ್ಲಾ ಪ್ರಶಸ್ತಿ
ಬೆಂಗಳೂರು : ಬೆಂಗಳೂರು ಮಹಾನಗರದ ಮೂವರು ವಿಜ್ಞಾನಿಗಳು 1998 ಮತ್ತು 1999ನೇ ಸಾಲಿನ ಪ್ರತಿಷ್ಠಿತ ಬಿ.ಎಂ. ಬಿರ್ಲಾ ವಿಜ್ಞಾನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಡಾ.ರಾಘವನ್ ವರದರಾಜನ್, ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಡಾ. ಬಿ.ವಿ. ರಾಜಾರಾಮ್ ಭಟ್ ಹಾಗೂ ಜವಾಹರಲಾಲ ನೆಹರೂ ವಿಜ್ಞಾನ ಸಂಶೋಧನಾ ಕೇಂದ್ರದ ಡಾ. ಎಸ್. ನಟರಾಜನ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ.
ಜೀವಶಾಸ್ತ್ರ ವಿಭಾಗದ ಸಾಧನೆಗಾಗಿ ಡಾ. ರಾಘವನ್ ಅವರಿಗೂ, ರಾಸಾಯನ ಶಾಸ್ತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ನಟರಾಜನ್ ಅವರಿಗೂ ಹಾಗೂ ಗಣಿತ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಅದ್ವಿತೀಯ ಸಾಧನೆಗಾಗಿ ರಾಜಾರಾಮ್ಭಟ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ.
ಭಾರತೀಯ ಬಾಹ್ಯಾಕಾಶ ಕೇಂದ್ರದ ಅಧ್ಯಕ್ಷ ಹಾಗೂ ಬಿರ್ಲಾ ವಿಜ್ಞಾನ ಪ್ರಶಸ್ತಿಗಳ ಮಂಡಳಿಯ ಅಧ್ಯಕ್ಷರೂ ಆದ ಕೆ. ಕಸ್ತೂರಿ ರಂಗನ್ ಅವರು ಈ ವಿಷಯ ತಿಳಿಸಿದ್ದಾರೆ. ಪ್ರಶಸ್ತಿಯು 50 ಸಾವಿರ ರುಪಾಯಿಗಳ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪಡೆದ ಇತರ ವಿಜ್ಞಾನಿಗಳು : ಡಾ. ಸಂಜಯ್ಪುರಿ - ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್, ನವದೆಹಲಿ (ಭೌತಶಾಸ್ತ್ರ), ಡಾ. ಚಾರುಸಿತಾ ಚಕ್ರವರ್ತಿ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ನವದೆಹಲಿ (ರಸಾಯನ ಶಾಸ್ತ್ರ), ಡಾ. ಕಪಿಲ್ ಹರಿ ಪರಾಂಜಪೆ - ಗಣಿತ ವಿಜ್ಞಾನಗಳ ಸಂಸ್ಥೆ - ಚೆನ್ನೈ (ಗಣಿತ ಶಾಸ್ತ್ರ), ಡಾ. ಸುದೇಷ್ನಾ ಸಿನ್ಹ - ಗಣಿತ ವಿಜ್ಞಾನಗಳ ಸಂಸ್ಥೆ - ಚೆನ್ನೈ (ಭೌತಶಾಸ್ತ್ರ), ಡಾ. ಶೇಖರ್ ಸಿ. ಮಾಂಡೆ - ಸೆಂಟರ್ ಫಾರ್ ಡಿಎನ್ಎ ಫಿಂಗರ್ಪ್ರಿಂಟ್ಸ್ ಮತ್ತು ಡಯೋಗ್ನಾಸ್ಟಿಕ್, ಹೈದರಾಬಾದ್ (ಜೀವಶಾಸ್ತ್ರ).
ಮುಖಪುಟ / ಇವತ್ತು... ಈ ಹೊತ್ತು...