ಸಂಸತ್ ಭವನದ ಮೇಲೆ ದಾಳಿ : ಬೆಂಗಳೂರು ವಿದ್ಯಾರ್ಥಿ ಬಂಧನ
ಬೆಂಗಳೂರು : ಸಂಸತ್ಭವನದ ಮೇಲೆ ಗುರುವಾರ ನಡೆದ ಉಗ್ರರ ದಾಳಿಗೆ ಬಳಸಲಾದ ಕಾರಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇಬ್ಬರು ಯುವಕರ ಪೈಕಿ ಒಬ್ಬ ಬೆಂಗಳೂರಿನ ವಿದ್ಯಾರ್ಥಿ. ಕಾಶ್ಮೀರದ ಶ್ರೀನಗರದಿಂದ ಬಂದಿರುವ ಈ ವರದಿಯ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಸಂಸತ್ ಭವನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇಬ್ಬರು ಕಾಶ್ಮೀರಿ ಯುವಕರ ಪೈಕಿ ಒಬ್ಬ ಬೆಂಗಳೂರಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ. ಈ ವಿಷಯವನ್ನು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾದ ವಿ.ವಿ. ಭಾಸ್ಕರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಪಡೆ ಮತ್ತು ರಾಜ್ಯ ಬೇಹುಗಾರಿಕೆ ಇಲಾಖೆಗಳು ಸಂಯುಕ್ತವಾಗಿ ಶನಿವಾರದಿಂದ ತನಿಖೆ ಕೈಗೊಂಡಿದ್ದು, ಶಂಕಿತ ವಿದ್ಯಾರ್ಥಿಯ ಪೂರ್ವಾಪರಗಳನ್ನು ಪತ್ತೆ ಮಾಡಲಿದ್ದಾರೆ ಎಂದರು. ಕಾಶ್ಮೀರದಿಂದ ಬಂದಿರುವ ವರದಿಯನ್ನು ಹೊರತು ಪಡಿಸಿದಂತೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಂಪ್ಯೂಟರ್ ಎಂಜನಿಯರಿಂಗ್ ವಿದ್ಯಾರ್ಥಿಯ ಬಗ್ಗೆ ಹೆಚ್ಚಿನ ಸುಳಿವು ಸದ್ಯಕ್ಕೆ ಕರ್ನಾಟಕ ಪೊಲೀಸರ ಬಳಿ ಇಲ್ಲ.
ವರದಿಗಳ ರೀತ್ಯ ಈ ವಿದ್ಯಾರ್ಥಿ ಡಿಸೆಂಬರ್ ಮೊದಲ ವಾರದಲ್ಲಿ ಈದ್ ಆಚರಣೆಯ ಸಲುವಾಗಿ ಕಾಶ್ಮೀರದ ಸಪೋರ್ಗೆ ತೆರಳಿದ್ದ. ಮತ್ತೊಬ್ಬ ಬಂಧಿತ ಆರೋಪಿಯು ಕೇಬಲ್ ಆಪರೇಟರ್ ಎನ್ನಲಾಗಿದೆ. ಇಬ್ಬರ ಆರೋಪಿಗಳ ಹೆಸರೂ ಆಸಿಕ್ ಹುಸೇನ್ ಖಾನ್ ಎಂದು ಅವರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುತ್ತಿರುವುದಾಗಿ ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತ ಎಚ್.ಟಿ. ಸಾಂಗ್ಲಿಯಾನ ಕೂಡ ತಿಳಿಸಿದ್ದಾರೆ.
(ಪಿ.ಟಿ.ಐ/ಇನ್ಪೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...