ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದಾ ? : ಮೂರು ಪ್ರತಿಕ್ರಿಯೆ
ಬೆಂಗಳೂರು : ಮಹಾರಾಷ್ಟ್ರದ ಮಂದಿಯಂತೂ ಪದೆ ಪದೇ ಕರ್ನಾಟಕ ಗಡಿ ವಿಷಯ ಕೆದಕುತ್ತಲೇ ಇರುತ್ತಾರೆ. ಈ ವರೆಗೆ ಕೇವಲ ಬೆಳಗಾವಿ ಮೇಲೆ ಮಾತ್ರ ಕಣ್ಣು ಇಟ್ಟಿದ್ದ ಮಹಾರಾಷ್ಟ್ರ ನಾಯಕರು ಈ ಹೊತ್ತು ಕಾರವಾರ, ನಿಪ್ಪಾಣಿಯೂ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೊಸ ರಾಗ ಎಳೆದಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ನಾಗಪುರದಲ್ಲಿ ಮಾತನಾಡುತ್ತಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಅವರು, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದರಲ್ಲಿ ರಾಜ್ಯದ ಎಲ್ಲ ಪಕ್ಷಗಳ ನಡುವೆ ಒಮ್ಮತವಿದೆ ಎಂದು ಘೋಷಿಸಿದರು.
ಈ ಸುದ್ದಿ ಕರ್ನಾಟಕದ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ, ಟಿ.ವಿ. ಚಾನೆಲ್ಗಳಲ್ಲೂ, ನಿಮ್ಮ ನೆಚ್ಚಿನ ಕನ್ನಡ.ಇಂಡಿಯಾ ಇನ್ಫೋ.ಕಾಂನಲ್ಲೂ ಪ್ರಕಟವಾಯಿತು. ಆದರೆ, ಇದರ ಬಗ್ಗೆ ರಾಜಕಾರಣಿಗಳಾಗಲೀ, ಕನ್ನಡಾಭಿಮಾನಿಗಳಾಗಲಿ, ಕನ್ನಡ ಸಂಘಟನೆಗಳೇ ಆಗಲಿ ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆ ಕಂಡುಬರಲೇ ಇಲ್ಲ. ಆದಾಗ್ಯೂ ನಮ್ಮ ಗಮನಕ್ಕೆ ಬಂದ ಮೂರು ಪ್ರತಿಕ್ರಿಯೆ ಹೀಗಿದೆ.
ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ : ಭಾಷಾವಾರು ಪ್ರಾಂತ್ಯ ವಿಭಜನೆಯಾಗಿ, ದಶಕಗಳೇ ಕಳೆದಿವೆ ಈಗ ಏಕೀಕರಣ ಇತಿಹಾಸದ ಪುಟವನ್ನು ಸೇರಿದೆ. ಆದರೂ ಕೆಲವರಿಗೆ ಹಳೆಯದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಆಸೆ. ನಮ್ಮ ರಾಜ್ಯದ ಒಂದಿಂಚು ಜಾಗವೂ ಪರಭಾರೆಯಾಗಲು ಬಿಡಲ್ಲ. (ಖಾಸಗಿ ಟಿ.ವಿ. ಚಾನೆಲ್ನೊಂದಿಗೆ ಮಾತನಾಡುತ್ತಾ)
ಮಾಜಿ ನಗರಾಭಿವೃದ್ಧಿ ಸಚಿವ ಸೋಮಣ್ಣ : ರಾಜ್ಯೋತ್ಸವ ಕಾರ್ಯಕ್ರಮಗಳು ಕೇವಲ ಅಬ್ಬರ ಆಚರಣೆಯ ಉತ್ಸವ ಆಗಬಾರದು. ನಮ್ಮ ಜಲ, ನೆಲ ಮತ್ತು ಗಡಿ ರಕ್ಷಣೆಯ ಹೋರಾಟ ವೇದಿಕೆಯಾಗಬೇಕು. ಈ ಹೊತ್ತು ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಹೇಳುತ್ತಿದ್ದಾರೆ.
ತಮಿಳುನಾಡಿನ ನಾಯಕರಂತೂ ಪದೆ ಪದೇ ಕಾವೇರಿ ನದಿ ನೀರಿನ ಮೇಲೆ ಪ್ರಭುತ್ವ ಸಾಧಿಸಲು ಕೂಗಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ನಮ್ಮ ರಾಜ್ಯದ ಹಿತ ಕಾಪಾಡಲು, ರಾಜ್ಯೋತ್ಸವ ಆಚರಣೆ ಸಮಿತಿಗಳು ಹೋರಾಟದ ವೇದಿಕೆಯಾಗಬೇಕು. (ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ)
ನಮ್ಮ ಓದುಗರಾದ ಕಲ್ಯಾಣ ರಾಮನ್ : ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರವನ್ನು ಕರ್ನಾಟಕದಲ್ಲೇ ಉಳಿಸಿಕೊಂಡು, ಇದರ ಜೊತೆಗೆ ಕಾಸರಗೋಡು, ನೀಲಗಿರಿ, ಅಕ್ಕಲಕೋಟೆ, ಅದ್ವಾನಿ, ಕಲ್ಯಾಣದುರ್ಗ... ಹೀಗೆ, ಬೇರೆ ರಾಜ್ಯಗಳಿಗೆ ಹರಿದು ಹಂಚಿ ಹೋಗಿರುವ ಕನ್ನಡದ ಪ್ರದೇಶಗಳನ್ನು ಕರ್ನಾಟಕಕ್ಕೆ ಮರು ಸೇರ್ಪಡೆ ಮಾಡಿಸುವ ಪ್ರಯತ್ನವನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಮಾಡಬೇಕಾಗಿದೆ.
ತಪ್ಪದ ವಿವಾದ : ಬೆಳಗಾವಿ ವಿವಾದ ಇಂದು ನಿನ್ನೆಯದೇನಲ್ಲ. ಏಕೀಕರಣದ ಕಾಲದಿಂದಲೂ ಈ ಕೂಗು ಇದ್ದೇ ಇದೆ. ಮಹಾಜನ್ ವರದಿಯ ಜಾರಿಯ ಕೂಗು ಮೂರು ದಶಕಗಳಿಂದ ಮೊಳಗುತ್ತಲೇ ಇದೆ. ಕೆಲವೇ ತಿಂಗಳ ಹಿಂದೆ ಕೇಂದ್ರ ಕೈಗಾರಿಕ ಸಚಿವ ಮನೋಹರ್ ಜೋಷಿ ಕನ್ನಡಿಗರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಒಪ್ಪಿಸುವಂತೆ ಶಿವಸೇನೆ ಹೋರಾಟ ನಡೆಸಲಿದೆ ಎಂದು ಹೇಳಿಕೆ ನೀಡಿದ್ದರು.
ಮಹಾರಾಷ್ಟ್ರದ ನಾಯಕರು, ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ ಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರ ಮೊರೆ ಹೋಗಿದ್ದರು. ಕೆಲವು ಮಹಾರಾಷ್ಟ್ರಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ಫಲಕವನ್ನೂ ನೆಟ್ಟು ವಿವಾದ ಸೃಷ್ಟಿಸಿದ್ದರು. ಇದೆಲ್ಲಾ ತಣ್ಣಗಾಯಿತು ಎನ್ನುವ ಹೊತ್ತಿಗೆ ವಿಲಾಸ್ರಾವ್ ದೇಶ್ಮುಖ್ ಹೊಸ ವರಸೆ ತೆಗೆದಿದ್ದಾರೆ.
ಅಂದಹಾಗೆ ಬೊಂಬಾಯಿ ಬಳಿ ‘ಕನ್ನಡ’ ಎಂಬ ಹೆಸರಿನ ತಾಲೂಕೆ ಇದೆ. ಬೊಂಬಾಯಿಯ ಸುತ್ತ ಮುತ್ತ ಕರ್ನಾಟಕದ ಹೆಸರುಗಳನ್ನು ಪ್ರತಿನಿಧಿಸುವ ಹತ್ತಾರು ಪ್ರಾಂತಗಳಿವೆ. ನಮ್ಮ ಹಿನ್ನೆಲೆ ನಮಗೆ ತಿಳಿದಿರಲಿ.
ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ವಾರ್ತಾ
ಸಂಚಯ
ಬೆಳಗಾವಿ,
ನಿಪ್ಪಾಣಿ
ಮತ್ತು
ಕಾರವಾರ
ಮಹಾರಾಷ್ಟ್ರಕ್ಕೆ
ಸೇರಿದ್ದಾ
?
‘ರಾಜ್ಯೋತ್ಸವ
ಸಮಿತಿಗಳು
ಜಲ,
ಗಡಿ
ರಕ್ಷಣೆಯ
ವೇದಿಕೆಯಾಗಬೇಕು’
ಮುಖಪುಟ / ಇವತ್ತು... ಈ ಹೊತ್ತು...