ಬೆಂಗಳೂರಿಗೂ ತಟ್ಟಿದ ದೆಹಲಿಯ ಬಿಸಿ; ವಿಧಾನಸೌಧಕ್ಕೆ ಸರ್ಪಗಾವಲು
ಬೆಂಗಳೂರು: ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಗುರುವಾರ ಬೆಳಗ್ಗೆ ನಡೆದ ಭಯೋತ್ಪಾದಕರ ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ವಿಧಾನಸೌಧ ಸೇರಿದಂತೆ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜ್ಯದ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿ.ವಿ. ಭಾಸ್ಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಚ್.ಟಿ. ಸಾಂಗ್ಲಿಯಾನ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಕೃಷ್ಣ ಈ ನಿರ್ದೇಶನ ನೀಡಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ - ಪಾರ್ಲಿಮೆಂಟ್ ಭವನದ ಮೇಲಿನ ದಾಳಿ ಅತ್ಯಂತ ಗಂಭೀರ ಸ್ವರೂಪದ ಬೆಳವಣಿಗೆ. ಈ ಘಟನೆ ನಮಗೆ ಎಚ್ಚರಿಕೆಯ ಸಂಕೇತ. ನಾವೆಲ್ಲ ಕಟ್ಟೆಚ್ಚರದಲ್ಲಿರಬೇಕಾಗಿದೆ ಎಂದರು.
ರಾಜ್ಯದೆಲ್ಲೆಡೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವಂತೆ ಹಾಗೂ ವಿಧಾನ ಸೌಧ ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ಹೆಚ್ಚಿನ ರಕ್ಷಣೆ ಕಲ್ಪಿಸುವಂತೆ ಪೊಲೀಸರಿಗೆ ತಿಳಿಸಿರುವುದಾಗಿ ಕೃಷ್ಣ ಹೇಳಿದರು. ಈ ನಡುವೆ ವಿಧಾನಸೌಧದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು , ಸಾರ್ವಜನಿಕರ ಪ್ರವೇಶವನ್ನು ಬಿಗಿಗೊಳಿಸಲಾಗಿದೆ. ಪಾಸ್ ಇಲ್ಲದ ಹೊರತು ವಿಧಾನಸೌಧಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ವಿಧಾನಸೌಧದ ಸಮೀಪ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನೂ ನಿಷೇಧಿಸಲಾಗಿದೆ.
ಬೆಂಗಳೂರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಗರ ವಿಮಾನ ನಿಲ್ದಾಣ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಮಾಹಿತಿ ತಂತ್ರಜ್ಞಾನ ಪಾರ್ಕ್ ಹಾಗೂ ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರದ ಪೊಲೀಸ್ ಕಾವಲನ್ನು ನಿಯೋಜಿಸಲಾಗಿದೆ. ಡಿಜಿಪಿ ದರ್ಜೆ ಅಧಿಕಾರಿಯಾಬ್ಬರು ವಿಮಾನ ನಿಲ್ದಾಣ ಸುರಕ್ಷತೆಯ ಹೊಣೆ ಹೊತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿವಿ ಭಾಸ್ಕರ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications