ರಾಜ್ ಅಪಹರಣ ಆಗದಿದ್ದಿದ್ದರೆ, ರಾಜ್ಯದ ಜಲಾಶಯ ಸ್ಫೋಟವಾಗ್ತಿತ್ತು
ಚಾಮರಾಜನಗರ : ಕಳೆದ ವರ್ಷ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು - ಬಿಡುಗಡೆ ಮಾಡಿದ್ದು ಈಗ ಇತಿಹಾಸ. ಒಂದೊಮ್ಮೆ ಡಾ. ರಾಜ್ರನ್ನು ಅಪಹರಿಸಲು ವೀರಪ್ಪನ್ ವಿಫಲವಾಗಿದ್ದರೆ, ಚಾಮರಾಜನಗರ ಜಿಲ್ಲೆಯ ಎರಡು ಜಲಾಶಯಗಳು ಇಂದು ಇರುತ್ತಲೇ ಇರಲಿಲ್ಲ ಎಂಬುದು ಈ ಹೊತ್ತು ಬೆಳಕಿಗೆ ಬಂದಿರುವ ಹೊಸ ಸುದ್ದಿ.
ಕರ್ನಾಟಕ ಪೊಲೀಸರ ಬಂಧನದಲ್ಲಿರುವ ನಕ್ಕೀರನ್ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯಂ ನೀಡಿದ ಸುಳಿವಿನ ಮೇಲೆ ಪೊಲೀಸರು ಬಂಧಿಸಿರುವ ಪಳನಿಸ್ವಾಮಿ ಮತ್ತು ತಂಗರಾಜನ್ ವಿಚಾರಣೆಯಿಂದ ಈ ವಿಷಯ ಹೊರಬಿದ್ದಿದೆ. ಜಲಾಶಯ ಸ್ಫೋಟಿಸಲೆಂದೇ ವೀರಪ್ಪನ್ನ ಸಹಚರರಲ್ಲೊಬ್ಬನಾದ ಶಿವರಾಮಕೃಷ್ಣನ್ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ಈ ಇಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಇವರ ಹೇಳಿಕೆಯ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹೊಂಗನೂರಿನ ತೋಟದ ಮನೆಯಲ್ಲಿ ವಾಸವಾಗಿದ್ದ ತಮಿಳುನಾಡು ನಂಬಿಯೂರಿನ ಶಿವರಾಮಕೃಷ್ಣನ್ನನ್ನು ಬಂಧಿಸಿದ್ದು, ಆತನ ವಿಚಾರಣೆಯಿಂದ ಜಲಾಶಯ ಸ್ಫೋಟದ ಸಂಚನ್ನು ಬಯಲಿಗೆಳೆದಿದ್ದಾರೆ.
ಡಾ.ರಾಜ್ಕುಮಾರ್ ಅಪಹರಣದ ತಂತ್ರವನ್ನು ಶಿವರಾಮಕೃಷ್ಣನ್ ತೋಟದ ಮನೆಯಲ್ಲೇ ರೂಪಿಸಲಾಗಿತ್ತು. ಇದಕ್ಕಾಗಿ ಈ ತೋಟದ ಮನೆಯಲ್ಲಿ 2ಸುತ್ತಿನ ಗುಪ್ತ ಸಭೆಗಳು ನಡೆದಿದ್ದವು. ಆ ಸಭೆಯಲ್ಲಿ ವೀರಪ್ಪನ್, ಶಿವರಾಮಕೃಷ್ಣನ್, ವೀರಪ್ಪನ್ ಸಹಚರರು ಮತ್ತು ಟಿಎನ್ಎಲ್ಎ ನಾಯಕರಾದ ಚಂದ್ರನ್, ಸತ್ಯನ್, ಮಾರನ್ ಪಾಲ್ಗೊಂಡಿದ್ದರು.
ಒಂದೊಮ್ಮೆ ಡಾ.ರಾಜ್ಕುಮಾರ್ ಅವರನ್ನು ಅಪಹರಿಸಲು ಸಾಧ್ಯವಾಗದಿದ್ದಲ್ಲಿ, ಜಿಲ್ಲೆಯ ಸುವರ್ಣಾವತಿ ಮತ್ತು ಬೆಲವತ್ತ ಜಲಾಶಯ ಸ್ಫೋಟಿಸಲು ವೀರಪ್ಪನ್ ಸೂಚಿಸಿದ್ದ, ಆತನ ಆದೇಶದ ಮೇರೆಗೆ ಶಿವರಾಮಕೃಷ್ಣನ್ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಎಂಬ ಅಂಶ ಹೊರಬಿದ್ದಿದೆ. ಶಿವರಾಮಕೃಷ್ಣನ್ ತೋಟದ ಮನೆಯಲ್ಲೇ ತಂಗಿದ್ದ ವೀರಪ್ಪನ್ ಮತ್ತು ಸಹಚರರು ಅಲ್ಲೇ ಊಟ ಮಾಡಿ, ಅಗತ್ಯ ಆಹಾರ ಸಾಮಗ್ರಿ ಕೊಂಡೊಯ್ದಿದ್ದರೆಂದು ಬಂಧಿತರ ವಿಚಾರಣೆಯಿಂದ ತಿಳಿದುಬಂದಿದೆ.
ಮುಖಪುಟ / ವೀರಪ್ಪನ್ ಶಿಕಾರಿ