ರಾಜ್ಯಾದ್ಯಂತ ಕಾಗಿನೆಲೆ ಕನಕಪೀಠ ಸ್ಥಾಪನೆ : ಶಿಕ್ಷಣ ಸಚಿವರ ಇಂಗಿತ
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಗಿನೆಲೆಯ ಕನಕ ಗುರುಪೀಠದ ಶಾಖೆಯನ್ನು ಸ್ಥಾಪಿಸಿ, ಸಮಾಜದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸುವ ಇಂಗಿತವನ್ನು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರದ ಕನಕ ಸಮಿತಿ ಆಯೋಜಿಸಿದ್ದ ‘ಶ್ರೀಭಕ್ತ ಕನಕದಾಸರ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ಕಾಗಿನೆಲೆ ಶಾಖಾ ಮಠ ಹರಿಹರ ಹಾಗೂ ಮಂಡ್ಯದಲ್ಲಿದೆ. ಡಿಸೆಂಬರ್ 13ರಂದು ಕೃಷ್ಣರಾಜನಗರದಲ್ಲಿ ಶಾಖೆ ಸ್ಥಾಪನೆಗೆ ಶಂಕುಸ್ಥಾಪನೆ ನಡೆಯಲಿದೆ. 10 ಲಕ್ಷ ರುಪಾಯಿ ವೆಚ್ಚದಲ್ಲಿ ಶಾಖಾ ಮಠ ಸ್ಥಾಪಿಸಲಾಗುವುದು ಎಂದರು.
ಜನಪ್ರತಿನಿಧಿಗಳಾದವರು ಎಲ್ಲ ಸಮಾಜದ ಏಳಿಗೆಗೆ ದುಡಿಯಬೇಕು. ತಮ್ಮ ಗೆಲುವಿನ ಹಮ್ಮಿನಲ್ಲಿ ಜನಪ್ರತಿನಿಧಿಗಳು ಇತರ ಸಮಾಜದವನ್ನು ದೂಷಿಸುವುದು ಸರ್ವತಾ ಸಲ್ಲ ಎಂದು ಸಚಿವರು ಹೇಳಿದರು. ಕಾಗಿನೆಲೆಗೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ನಿತ್ಯ ಅನ್ನದಾನ ಮಾಡುವ ಸಲುವಾಗಿ 25 ಲಕ್ಷರುಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಈ ನಿಧಿಗೆ 17 ಲಕ್ಷ ರುಪಾಯಿ ಸಂಗ್ರಹವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಕಿರಿಯ ಸ್ವಾಮೀಜಿಗಳಾದ ಸೌಮ್ಯನಾಥ ಸ್ವಾಮೀಜಿಗಳು, ನಾವು ಹಿಂದೂ ಸಮಾಜದ ವಿವಿಧ ಪಂಗಡಕ್ಕೆ ಸೇರಿದವರಾಗಿದ್ದರೂ ಕೂಡ ನಾವೆಲ್ಲಾ ಹಿಂದೂಗಳು ಎಂಬುದನ್ನು ಮಾತ್ರ ಮರೆಯಬಾರದು. ನಮ್ಮೆಲ್ಲರ ಧಾರ್ಮಿಕ ಆಚರಣೆ ಭಿನ್ನವಾದರೂ ಮನಸ್ಸು ಒಂದೇ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೇ ಮಂಡಳಿಯ ಕೆ.ಎಸ್. ಈಶ್ವರಪ್ಪ, ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ, ಉಪ ಮೇಯರ್ ಆರ್. ಶಂಕರ್, ಶಾಸಕ ಎಚ್.ಎಂ. ರೇವಣ್ಣ ಮೊದಲಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...